ADVERTISEMENT

2 ಜಿ ಹಗರಣ: ಟ್ರಾಯ್ ವರದಿಗೆ ಸುಪ್ರೀಂ ತರಾಟೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ನವದೆಹಲಿ, (ಪಿಟಿಐ):  ಎ.ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ 2ಜಿ ತರಂಗಾಂತರ ಹಂಚಿಕೆ ವ್ಯವಹಾರದಿಂದ ಯಾವುದೇ ನಷ್ಟವಾಗಿರಲಿಲ್ಲ ಎಂಬ ದೂರವಾಣಿ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಅದರ  ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ.

`ಸ್ವಾಯತ್ತ ನಿಯಂತ್ರಣ ಮಂಡಳಿಯೊಂದು ಇಂತಹ ವರದಿ ನೀಡಿರುವ ಬಗ್ಗೆ ನಮಗೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ, ಈ ಬಗ್ಗೆ ಚರ್ಚೆಯಾಗಬೇಕು~ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಹೇಳಿದರು.

ಸಿಬಿಐ ಸಹ ಟ್ರಾಯ್ ವರದಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ವರದಿಯನ್ನು ತಾನು ಒಪ್ಪಿಕೊಂಡಿಲ್ಲ ಎಂದು ತಿಳಿಸಿದೆ. 

2ಜಿ ಹಗರಣದ ಆಪಾದನೆಗೆ ಒಳಗಾದವರು ವರದಿಯ ಲಾಭ ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಸಿಬಿಐ ಇದನ್ನು ಒಪ್ಪಿಕೊಂಡಿಲ್ಲ ಎಂದು ವಕೀಲ ಕೆ.ಕೆ.ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದರು.

ತರಂಗಾಂತರ ಹಂಚಿಕೆಯಿಂದ ಸರ್ಕಾರಕ್ಕೆ ಆಗಿರುವ ನಷ್ಟದ ಬಗ್ಗೆ ಸಿಬಿಐ ಮತ್ತು ಸಿಎಜಿ ವಿಭಿನ್ನ ಅಂಕಿಸಂಖ್ಯೆ ನೀಡಿರುವ ಬಗ್ಗೆಯೂ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿದೆ.

ಸಿವಿಸಿಗೆ ಹೊಸ ದೂರು
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಜಾಗೃತ ಆಯೋಗಕ್ಕೆ ಹೊಸದಾಗಿ ಮತ್ತೆ ಹಲವು ದೂರುಗಳು ಬಂದಿವೆ.

ಮಾಜಿ ಸಚಿವ ಎ.ರಾಜಾ, ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಹಾಗೂ ನಿವೃತ್ತ ಸಿಬ್ಬಂದಿಯ ಅಕ್ರಮಗಳ ಬಗೆಗಿನ ಈ ದೂರುಗಳನ್ನು ಆಯೋಗ ಹೆಚ್ಚಿನ ಪರಿಶಿಲನೆಗಾಗಿ ಸಿಬಿಐಗೆ ಕಳುಹಿಸಿದೆ.

ಹೆಚ್ಚಿನ ದೂರುಗಳು ತರಂಗಾಂತರ ಹಂಚಿಕೆ ವೇಳೆ ಸರ್ಕಾರಿ ನಿಯಮಾವಳಿ ಉಲ್ಲಂಘಿಸಿದ ಕುರಿತಾಗಿವೆ. ಈ ದೂರುಗಳ ವಿಶ್ವಾಸಾರ್ಹತೆ ಮತ್ತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಪರಿಶೀಲಿಸುವಂತೆ ಸಿಬಿಐಗೆ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.