ನವದೆಹಲಿ: ವ್ಯಭಿಚಾರವನ್ನು ಅಪರಾಧಮುಕ್ತಗೊಳಿಸಿದ್ದ 2018ರ ಕೋರ್ಟ್ ತೀರ್ಪನ್ನು ಸೇನಾ ಸಿಬ್ಬಂದಿಗೆ ಅನ್ವಯಿಸುವುದು ಬೇಡ ಎಂಬುದಾಗಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬುಧವಾರ ನೋಟಿಸ್ ಜಾರಿಗೊಳಿಸಿದೆ.
ಕೇಂದ್ರದ ಮನವಿ ಕುರಿತಂತೆ ಅರ್ಜಿದಾರರು ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ನವೀನ್ ಸಿಂಗ್ ಹಾಗೂ ಕೆ.ಎಂ. ಜೋಸೆಫ್ ಅವರ ಪೀಠವು, ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡುವಂತೆ ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬಡೆ ಅವರಿಗೆ ಶಿಫಾರಸು ಮಾಡಿತು.
ಅಂದಿನ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅನ್ನು (ವ್ಯಭಿಚಾರ) ಸರ್ವಾನುಮತದಿಂದ ತೆಗೆದುಹಾಕಿತ್ತು. ವ್ಯಭಿಚಾರ ಅಪರಾಧವಲ್ಲ ಮತ್ತು ದಂಡ ವಿಧಿಸುವಿಕೆಯು ಅಸಾಂವಿಧಾನಿಕ ಎಂದು ಮಹತ್ವದ ತೀರ್ಪು ನೀಡಿತ್ತು. ‘ಇದು ಪುರಾತನ ಕಾನೂನು. ಸಮಾನತೆಯ ಹಕ್ಕುಗಳನ್ನು ಮತ್ತು ಮಹಿಳೆಯರಿಗೆ ಸಮಾನ ಅವಕಾಶವನ್ನು ನಿರಾಕರಿಸುತ್ತದೆ’ ಎಂದು ಪೀಠ ಉಲ್ಲೇಖಿಸಿತ್ತು.
ಹೀಗಿದ್ದಾಗ್ಯೂ, ವ್ಯಭಿಚಾರವು ವೈವಾಹಿಕ ವಿವಾದಗಳಲ್ಲಿ ವಿಚ್ಚೇದನ ಪಡೆಯಲು ಒಂದು ಅಂಶವಾಗಿ ಮುಂದುವರಿಯುತ್ತದೆ ಎಂದು ಪೀಠ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.