ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದ 15 ಮಂದಿಗೆ ನೀಡಿದ್ದ ವಿಶೇಷ ಭದ್ರತೆ(ಎಸ್ಎಸ್ಜಿ) ಯನ್ನು ಜಮ್ಮು ಕಾಶ್ಮೀರದ ಸರ್ಕಾರವು ವಾಪಸ್ ಪಡೆದಿದೆ.
ಮಾಜಿ ಮುಖ್ಯಮಂತ್ರಿಗಳಾದ ಎನ್ಸಿ ಪಕ್ಷದ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಕಾಂಗ್ರೆಸ್ನ ಗುಲಾಂ ನಬಿ ಅಜಾದ್ ಅವರಿಗೆ ನೀಡಿದ್ದ ಎಸ್ಎಸ್ಜಿ ಭದ್ರತೆಯನ್ನು 2021ರ ಜುಲೈ 18 ಹಾಗೂ ಸೆ.21ರಂದು ನಡೆದ ಭದ್ರತಾ ಸಮನ್ವಯ ಸಮಿತಿಯ ತೀರ್ಮಾನದಂತೆ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಕೇಂದ್ರ ಗೃಹ ಇಲಾಖೆಯು ಎಡಿಜಿಪಿ (ಭದ್ರತೆ) ಪತ್ರ ಬರೆದಿದ್ದು, ಎಸ್ಎಸ್ಜಿ ಸಿಬ್ಬಂದಿಯನ್ನು ಕಡಿತಗೊಳಿಸುವ ತಮ್ಮ ಪ್ರಸ್ತಾವವನ್ನು ಕೇಂದ್ರ ಗೃಹ ಇಲಾಖೆ ಒಪ್ಪಿಕೊಂಡಿದೆ. ಎಷ್ಟು ಸಾಧ್ಯವೊ ಅಷ್ಟು ಕಡಿಮೆ ಮಾಡಿ. ಇದರ ನಿರ್ವಹಣೆಗೆ ಒಬ್ಬ ಡಿಎಸ್ಪಿಯನ್ನು ನೇಮಿಸಿ ಎಂದು ನಿರ್ದೇಶನ ನೀಡಿದೆ. ಎಸ್ಎಸ್ಜಿಯಲ್ಲಿದ್ದ ಸಿಬ್ಬಂದಿಯನ್ನು ಬೇರೆ ಬೇರೆ ವಿಭಾಗಕ್ಕೆ ನೇಮಿಸುವಂತೆ
ಸೂಚಿಸಿದೆ.
2020ರ ಮಾರ್ಚ್ 31ರಂದು ಜಮ್ಮು ಕಾಶ್ಮೀರ ವಿಶೇಷ ಭದ್ರತಾ ಪಡೆ – 2000 ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಈ ಕಾಯ್ದೆ ಅನ್ವಯ ಹಾಲಿ ಮುಖ್ಯಮಂತ್ರಿಗೆ ಮಾತ್ರ ಎಸ್ಎಸ್ಜಿ ಭದ್ರತೆ ಸಿಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.