ADVERTISEMENT

ಸಂಸದರು, ಶಾಸಕರ ವಿರುದ್ಧದ 4,122 ಪ್ರಕರಣಗಳ ವಿಚಾರಣೆ ಬಾಕಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 8:43 IST
Last Updated 4 ಡಿಸೆಂಬರ್ 2018, 8:43 IST
   

ನವದೆಹಲಿ: ಮಾಜಿ, ಹಾಲಿ ಶಾಸಕರುಹಾಗೂ ಸಂಸದರುಗಳಿಗೆ ಸಂಬಂಧಿಸಿದ ಒಟ್ಟು 4,122 ಪ್ರಕರಣಗಳ ವಿಚಾರಣೆ ದೇಶದಾದ್ಯಂತ ಬಾಕಿ ಉಳಿದಿವೆ ಎಂಬ ವಿವರಗಳನ್ನೊಳಗೊಂಡ ವರದಿಯುಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದೆ. ಒಂದು ವರ್ಷದೊಳಗಾಗಿ ಈ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸುವಂತೆಸುಪ್ರಿಂ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದೂವರದಿಯಲ್ಲಿ ತಿಳಿಸಲಾಗಿದೆ.

‘ಒಟ್ಟು ಪ್ರಕರಣಗಳಲ್ಲಿ 2,324 ಪ್ರಕರಣಗಳು ಹಾಲಿ ಶಾಸಕರು ಹಾಗು ಸಂಸದರ ವಿರುದ್ಧದವುಗಳಾಗಿವೆ. ಆಚ್ಚರಿಯ ಸಂಗತಿಯೆಂದರೆ ಕೆಲ ಪ್ರಕರಣಗಳು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಇತ್ಯರ್ಥವಾಗದೇ ಉಳಿದಿವೆ’ ಎಂದುಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ಅವರು ಸಲ್ಲಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯಗಳಲ್ಲಿ ತಡೆ ನೀಡಲಾಗಿರುವುದು ವಿಚಾರಣೆ ವಿಳಂಬವಾಗಲು ಕಾರಣ ಎನ್ನಲಾಗಿದೆ.

ಉತ್ತರ ಪ್ರದೇಶದ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಒಟ್ಟು 992 ಪ್ರಕರಣಗಳು ಬಾಕಿಯಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒರಿಶಾ, ತಮಿಳುನಾಡು, ಕೇರಳ, ಬಿಹಾರ, ಮಹಾರಾಷ್ಟ್ರ ರಾಜ್ಯಗಳು ನಂತರದ ಸ್ಥಾನಗಳಲ್ಲಿದ್ದು, ಕ್ರಮವಾಗಿ 331, 321, 312, 304, 303 ಪ್ರಕರಣಗಳು ಬಾಕಿ ಇವೆ. ಇದೇ ಮಾದರಿಯ 161 ಪ್ರಕರಣಗಳುಕರ್ನಾಟಕದಲ್ಲಿ ದಾಖಲಾಗಿವೆ. ಅದರಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಂಸದರ ವಿರುದ್ಧ 2 ಮತ್ತು ಶಾಸಕರ ವಿರುದ್ಧ 95 ಪ್ರಕರಣಗಳು ಸೇರಿವೆ.

ADVERTISEMENT

ಜೀವಾವಧಿ ಶಿಕ್ಷೆಗೆ ಒಳಪಡುವಂತಹ ಗಂಭೀರ ಪ್ರಮಾಣದ ಅಪರಾಧಗಳಲ್ಲಿ ಭಾಗಿಯಾಗಿರುವ ಶಾಸಕರು, ಸಂಸದರಿಗೆ ಶಿಕ್ಷೆ ಜಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಸಲಹೆ ನೀಡಿದ್ದರು.

ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ, ಹನ್ಸಾರಿಯಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿತ್ತು. ಅವರು ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ತಿಳಿಸಿದ್ದರು.

ದೇಶದ ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಂದ ಮಾಹಿತಿ ಪಡೆದು ವರದಿ ತಯಾರಿಸಿರುವ ಅಮಿಕಸ್‌ ಕ್ಯೂರಿ ದೇಶದ ಒಟ್ಟು 724 ಜಿಲ್ಲೆಗಳ ಪೈಕಿ 440 ಜಿಲ್ಲೆಗಳಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದನ್ನು ಉಲ್ಲೇಖಸಿದ್ದಾರೆ.

‘ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ಸಂಖ್ಯೆ ಹಾಗೂ ಅಪರಾಧಗಳ ಪ್ರಮಾಣ ಒಂದೇ ಆಗಿಲ್ಲ. ಕೆಲವರ ವಿರುದ್ಧ ಒಂದೇ ರೀತಿಯ ಹಲವುಪ್ರಕರಣಗಳು ದಾಖಲಾಗಿವೆ. ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳು ದಾಖಲಾದ ನಂತರ ಒಂದು ವರ್ಷದ ಒಳಗಾಗಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಮಾರ್ಚ್‌ 10, 2014ರಂದು ಸುಪ್ರೀಂ ತೀರ್ಪು ನೀಡಿತ್ತು. ಆ ಸಂಬಂಧ ಹೈಕೋರ್ಟ್‌ಗಳಿಂದ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ’ ಎಂದುದೂರಿದ್ದಾರೆ.

12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆಯಾದರೂ ಬಾಕಿ ಉಳಿದುಕೊಂಡಿರುವ ಪ್ರಕರಣಗಳ ಆಧಾರದಲ್ಲಿ ಅವುಗಳನ್ನುಏಕರೂಪವಾಗಿ ಸ್ಥಾಪಿಸಲ್ಪಟ್ಟಿಲ್ಲ.ಮಧ್ಯಂತರ ತಡೆ ನೀಡಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆಹೈಕೋರ್ಟ್‌ಗಳಿಗೆ ನಿರ್ದೇಶಿಸಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.