ನವದೆಹಲಿ: ಬ್ಯಾಂಕ್ಗಳ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ₹ 50 ಕೋಟಿಗೂ ಹೆಚ್ಚು ಮೊತ್ತದ ಸಾಲ ಪಡೆಯುವವರು ತಮ್ಮ ಪಾಸ್ಪೋರ್ಟ್ ವಿವರ ಸಲ್ಲಿಸುವುದನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
‘ಸಾಲ ಮರುಪಾವತಿಸದೇ ದೇಶ ಬಿಟ್ಟು ಪರಾರಿಯಾಗುವುದನ್ನು ತಡೆಗಟ್ಟಲು ಬ್ಯಾಂಕ್ಗಳು ಸಕಾಲದಲ್ಲಿ ಕ್ರಮ ಕೈಗೊಳ್ಳಲು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ವಂಚಕರ ಬಗ್ಗೆ ಮಾಹಿತಿ ನೀಡಲು ಪಾಸ್ಪೋರ್ಟ್ ಮಾಹಿತಿ ನೆರವಾಗಲಿದೆ. ₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ಪಡೆಯುವ ಎಲ್ಲ ಹೊಸ ಸಾಲಗಾರರಿಂದ ಬ್ಯಾಂಕ್ಗಳು ಈ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ₹ 50 ಕೋಟಿಗೂ ಅಧಿಕ ಮೊತ್ತದ ಸಾಲ ಪಡೆದಿರುವವರು 45 ದಿನಗಳ ಒಳಗಾಗಿ ತಮ್ಮ ಪಾಸ್ಪೋರ್ಟ್ ವಿವರಗಳನ್ನು ಸಲ್ಲಿಸುವಂತೆ ಬ್ಯಾಂಕ್ಗಳು ಆದೇಶಿಸಬೇಕು ಎಂದೂ ಅವರು ಸೂಚಿಸಿದ್ದಾರೆ.
ಬ್ಯಾಂಕ್ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗುವವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು, ಕೇಂದ್ರ ಸಚಿವ ಸಂಪುಟವು ಕಳೆದ ವಾರವಷ್ಟೇ ‘ಪರಾರಿಯಾಗುವ ಆರ್ಥಿಕ ಅಪರಾಧಿಗಳ ಮಸೂದೆ’ಗೆ ಒಪ್ಪಿಗೆ ಸೂಚಿಸಿದೆ.
₹100 ಕೋಟಿಗೂ ಅಧಿಕ ಮೊತ್ತದ ಸಾಲ ಪಡೆದು ದೇಶ ತೊರೆದಿರುವ ಎಲ್ಲ ವಂಚಕರ ಪ್ರಕರಣಗಳಿಗೂ ಈ ಮಸೂದೆ ಅನ್ವಯವಾಗಲಿದೆ.
₹50 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ ವಸೂಲಾಗದ ಸಾಲಗಳ ದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ಸಿಬಿಐಗೆ ಮಾಹಿತಿ ನೀಡುವಂತೆಯೂ ಕೇಂದ್ರ ಹಣಕಾಸು ಸಚಿವಾಲಯ ಎಲ್ಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಕಳೆದ ವಾರ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.