ADVERTISEMENT

ಮಹದಾಯಿ ನೀರು ಹಂಚಿಕೆ ಅನಿವಾರ್ಯ: ಪರ‍್ರೀಕರ್‌

ಪಿಟಿಐ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಮಹದಾಯಿ ನೀರು ಹಂಚಿಕೆ ಅನಿವಾರ್ಯ: ಪರ‍್ರೀಕರ್‌
ಮಹದಾಯಿ ನೀರು ಹಂಚಿಕೆ ಅನಿವಾರ್ಯ: ಪರ‍್ರೀಕರ್‌   

ಪಣಜಿ: ಮಹದಾಯಿ ನದಿಯ ನೀರನ್ನು ಇತರ ರಾಜ್ಯಗಳ ಜತೆ ಹಂಚಿಕೊಳ್ಳುವುದು ಅನಿವಾರ್ಯ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಹೇಳಿದ್ದಾರೆ. ಜತೆಗೆ, ಈ ವಿಚಾರದಲ್ಲಿ ಗೋವಾದ ಹಿತಾಸಕ್ತಿ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. 

‘ಮಹದಾಯಿ ನದಿಯು ಗೋವಾದಲ್ಲಿ 52 ಕಿ.ಮೀ. ಹರಿದರೆ, ಕರ್ನಾಟಕದಲ್ಲಿ 35 ಕಿ.ಮೀ ಮತ್ತು ಮಹಾರಾಷ್ಟ್ರದಲ್ಲಿ 16 ಕಿ.ಮೀ. ಹರಿಯುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನದಿಯು ಮೂರು ರಾಜ್ಯಗಳಲ್ಲಿ ಹರಿಯುವುದರಿಂದ ನೀರನ್ನು ಹಂಚಿಕೊಳ್ಳುವುದು ಅನಿವಾರ್ಯ. ಮೂರೂ ರಾಜ್ಯಗಳಿಗೆ ಮಹದಾಯಿ ನೀರಿನ ಮೇಲೆ ಹಕ್ಕಿದೆ’ ಎಂದು ಹೇಳಿದ್ದಾರೆ.

‘ನ್ಯಾಯಮಂಡಳಿಯ ಆದೇಶದ ಮೂಲಕ ಕರ್ನಾಟಕಕ್ಕೆ ನೀರಿನ ಪಾಲು ದೊರೆಯದು ಎಂದು ಯಾರಾದರೂ ನಂಬಿದ್ದರೆ ಅವರು ಭ್ರಮಾಲೋಕದಲ್ಲಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಆದರೆ, ಕರ್ನಾಟಕವು ಮಹದಾಯಿ ನೀರನ್ನು ಬೇರೆಡೆಗೆ ತಿರುಗಿಸುವುದು ಅಥವಾ ಬೇರೆ ನದಿ ಪಾತ್ರಕ್ಕೆ ಹರಿಸುವುದಕ್ಕೆ ಅವಕಾಶ ಇಲ್ಲ. ಅವರು ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಅಥವಾ ನದಿ ಪಾತ್ರದ ಪ್ರದೇಶದಲ್ಲಿಯೇ ಬಳಸಿಕೊಳ್ಳಬೇಕು’ ಎಂದು ಪರ‍್ರೀಕರ್‌
ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮಹದಾಯಿ ನ್ಯಾಯಮಂಡಳಿ ಮುಂದೆ ಈಗ ಇರುವುದು ನದಿ ಪಾತ್ರದಿಂದ ನೀರನ್ನು ಬೇರೆಡೆಗೆ ತಿರುಗಿಸುವ ವಿಚಾರ ಮಾತ್ರ. ಈ ನದಿಯಲ್ಲಿ ನೀರಿನ ಕೊರತೆ ಇದೆಯೇ ಎಂಬುದನ್ನು ಮಂಡಳಿಯು ನಿರ್ಧರಿ ಸಲಿದೆ ಎಂದು ಅವರು ಹೇಳಿದ್ದಾರೆ.

‘ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ ಪ್ರಕಾರ, ನೀರಿನ ಕೊರತೆ ಇರುವ ನದಿ ಪಾತ್ರದಿಂದ ನೀರನ್ನು ಬೇರೆಡೆಗೆ ತಿರುಗಿಸುವುದಕ್ಕೆ ಅವಕಾಶ ಇಲ್ಲ. ಮಹದಾಯಿ ನದಿಯಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ನಾವು ದಾಖಲೆ ಸಮೇತ ಸಾಬೀತು ಮಾಡಿದ್ದೇವೆ’ ಎಂದು ಪರ‍್ರೀಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.