ನವದೆಹಲಿ: ಗುಜರಾತ್ನ ವಡ್ಗಾಮ್ ಕ್ಷೇತ್ರದ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಇಲ್ಲಿನ ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿ ಆಯೋಜಿಸಲು ಉದ್ದೇಶಿಸಿದ್ದ ‘ಯುವ ಹೂಂಕಾರ್ ರ್ಯಾಲಿ’ ಪೊಲೀಸರ ಅನುಮತಿ ದೊರೆಯದೆ ರದ್ದಾಗಿದೆ.
ರ್ಯಾಲಿ ರದ್ದಾಗಿರುವುದಕ್ಕೆ ದೆಹಲಿಯಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಸದ್ಯದ ಪರಿಸ್ಥಿತಿಯ ಬಗ್ಗೆ ದೆಹಲಿ ಪೊಲೀಸ್ ಜಂಟಿ ಆಯುಕ್ತ ಅಜಯ್ ಚೌಧರಿ ಪ್ರತಿಕ್ರಿಯೆ ನೀಡಿದ್ದು, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ನಿರ್ದೇಶನದ ಮೇರೆಗೆ ರ್ಯಾಲಿಗೆ ಅನುಮತಿ ನಿರಾಕರಿಸಲಾಗಿದೆ ಎಂದಿದ್ದಾರೆ. ಬೇರೆ ಪ್ರದೇಶದಲ್ಲಿ ರ್ಯಾಲಿ ಆಯೋಜಿಸುವಂತೆ ಸಂಘಟಕರಿಗೆ ಸೂಚಿಸಲಾಗಿತ್ತು ಎಂದು ಹಿರಿಯ ಪೊಲೀಸರೊಬ್ಬರು ತಿಳಿಸಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿರುವ ಜಿಗ್ನೇಶ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪೊಲೀಸ್ ಅನುಮತಿ ನಿರಾಕರಣೆ ಹೊರತಾಗಿಯೂ ರ್ಯಾಲಿ ನಡೆಸುವುದಾಗಿ ಜಿಗ್ನೇಶ್ ಬೆಳಿಗ್ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.
ಈ ಮಧ್ಯೆ, ಮೇವಾನಿ ಅವರನ್ನು ಟೀಕಿಸಿ ದೆಹಲಿಯ ಹಲವೆಡೆ ಬ್ಯಾನರ್ಗಳನ್ನ ಪ್ರದರ್ಶಿಸಲಾಗಿದೆ ಎಂದೂ ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.