ಚಂಡಿಗಡ : ಐಎಎಸ್ ಅಧಿಕಾರಿ ವಿರೇಂದರ್ ಕುಂದು ಅವರ ಮಗಳು ವರ್ಣಿಕಾ ಕುಂದು ಅವರನ್ನು ಹಿಂಬಾಲಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಕಾಸ್ ಬರಾಲ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಕಳೆದ ವರ್ಷ ಆಗಸ್ಟ್ನಿಂದ ವಿಕಾಸ್ ಬರಾಲ ಜೈಲಿನಲ್ಲಿದ್ದರು. ವಿಕಾಸ್, ಹರಿಯಾಣ ಬಿಜೆಪಿ ಘಟಕದ ಮುಖ್ಯಸ್ಥ ಸುಭಾಷ್ ಬರಾಲ ಅವರ ಮಗ.
‘ ವಿಕಾಸ್ ಬರಾಲ ಅವರಿಗೆ ಜಾಮೀನು ನೀಡಲು ನ್ಯಾಯಮೂರ್ತಿ ಲಿಸಾ ಗಿಲ್ ಒಪ್ಪಿದ್ದಾರೆ’ ಎಂದು ಬರಾಲ ಅವರ ವಕೀಲ ವಿನೋದ್ ಘಾಯಿ ತಿಳಿಸಿದರು.
‘ವರ್ಣಿಕಾ ಕುಂದು ಅವರನ್ನು ಅಪಹರಿಸುವ ಉದ್ದೇಶ ವಿಕಾಸ್ಗೆ ಇರಲಿಲ್ಲ. ಈ ಪ್ರಕರಣ ದಾಖಲಿಸುವ ವೇಳೆ ವರ್ಣಿಕಾಳ ತಂದೆ ಹಾಗೂ ಅವರ ವಕೀಲರು ಪೊಲೀಸ್ ಠಾಣೆಯಲ್ಲಿ ಹಾಜರಿದ್ದರು. ಇಡೀ ಪ್ರಕರಣವನ್ನು ತಿರುಚಿರುವ ಸಾಧ್ಯತೆಯಿದೆ, ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೂ ಯಾರ ಮೇಲೂ ಒತ್ತಡ ಹೇರಿಲ್ಲ ’ ಎಂದು ವಿಕಾಸ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಜನವರಿ 9 ಹಾಗೂ 11ರಂದು ಜಿಲ್ಲಾ ನ್ಯಾಯಾಲಯವು ಪಾಟೀ ಸವಾಲಿಗೆ ಒಳಪಡಿಸಿತ್ತು. ಎಲ್ಲ ಅಂಶಗಳನ್ನು ಪರಿಗಣಿಸಿ ಹೈಕೋರ್ಟ್ ಆರೋಪಿ ವಿಕಾಸ್ಗೆ ಜಾಮೀನು ನೀಡಿದೆ.
ಈ ಹಿಂದೆ ಚಂಡಿಗಡದ ಜಿಲ್ಲಾ ನ್ಯಾಯಾಲಯವು ಬರಾಲ ಅವರ ಜಾಮೀನು ಅರ್ಜಿಯನ್ನು ನಾಲ್ಕು ಬಾರಿ ತಿರಸ್ಕರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.