ಪಟ್ನಾ: ಉಪವಿಭಾಗೀಯ ಅಧಿಕಾರಿ ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ, ಉತ್ತರ ಬಿಹಾರದ ಬೇನಿಪುರ ಗ್ರಾಮದ ಸಹ ಶಿಕ್ಷಕನಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸ್ವಚ್ಛತಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ ಶಿಕ್ಷಕ ಸಜ್ಜನ್ ಪಾಸ್ವಾನ್ ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಿರುವುದು ಅಕ್ಷಮ್ಯ ಎಂದು, ನೋಟಿಸ್ ನೀಡಿರುವ ಐಎಎಸ್ ಪ್ರೊಬೇಷನರಿ ಅಧಿಕಾರಿ ವಿಜಯ್ ಪ್ರಕಾಶ್ ಮೀನಾ ಹೇಳಿದ್ದಾರೆ.
‘ಸರ್ಕಾರದ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಬೇಕಾದ ಶಿಕ್ಷಕ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ಕೆಟ್ಟ ಮಾದರಿಯಾಗಿದ್ದಾರೆ’ ಎಂದು ಅವರು ನೋಟಿಸ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಬೇಷರತ್ ಕ್ಷಮೆ ಯಾಚಿಸಿರುವ ಸಜ್ಜನ್, ಇನ್ನು ಮುಂದೆ ಎಂದಿಗೂ ಈ ರೀತಿ ವರ್ತಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ನೈರ್ಮಲ್ಯದ ವಿಷಯದಲ್ಲಿ ಸಾಕಷ್ಟು ಹಿಂದುಳಿದಿರುವ ಬಿಹಾರದಲ್ಲಿ, ಗ್ರಾಮೀಣ ಪ್ರದೇಶಗಳು ಮಾತ್ರವಲ್ಲ ರಾಜಧಾನಿ ಪಟ್ನಾದಲ್ಲೂ ತೀವ್ರ ಅನೈರ್ಮಲ್ಯ ಎದ್ದುಕಾಣುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಇಲ್ಲಿ ಸಾಮಾನ್ಯ ದೃಶ್ಯ. ಕೇಂದ್ರ ಸರ್ಕಾರದ ‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆಯಲ್ಲಿ ದೇಶದ 434 ನಗರಗಳ ಪೈಕಿ ಪಟ್ನಾ 262ನೇ ಸ್ಥಾನದಲ್ಲಿದೆ. ಹೀಗಾಗಿ, ಶಿಕ್ಷಕನ ವಿರುದ್ಧ ಕೈಗೊಂಡಿರುವ ಈ ಕ್ರಮ ಗಮನಸೆಳೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.