ನವದೆಹಲಿ: ವಿವಾದಿತ ‘ಪದ್ಮಾವತ್’ ಸಿನಿಮಾಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು(ಸಿಬಿಎಫ್ಸಿ) ನೀಡಿರುವ ಪ್ರಮಾಣಪತ್ರ ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
‘ಸಿನಿಮಾ ಪ್ರದರ್ಶನದಿಂದ ಕಾನೂನು ಸುವ್ಯವಸ್ಥೆ ಹದಗೆಡಲಿದೆ, ಆಸ್ತಿ ಮತ್ತು ಜೀವ ಹಾನಿ ಸಂಭವಿಸಬಹುದು. ಹಾಗಾಗಿ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಅರ್ಜಿದಾರರಾದ ವಕೀಲ ಎಂ.ಎಲ್.ಶರ್ಮಾ ಕೋರಿದ್ದರು.
‘ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸವಲ್ಲ. ಅದನ್ನು ಆಯಾ ರಾಜ್ಯಗಳು ನಿಭಾಯಿಸುತ್ತವೆ. ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಖಡಕ್ಕ್ಕಾಗಿ ತಿಳಿಸಿತು.
[related]
‘ಈ ಸಿನಿಮಾದ ಕುರಿತು ಗುರುವಾರವೇ ನಾವು ಸಕಾರಣವಾದ ಆದೇಶ ಹೊರಡಿಸಿದ್ದೇವೆ. ಸಿಬಿಎಫ್ಸಿ ಚಿತ್ರ ಬಿಡುಗಡೆಗೆ ಒಮ್ಮೆ ಪ್ರಮಾಣಪತ್ರ ನೀಡಿದ ಬಳಿಕ, ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯತೆ ಇಲ್ಲ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಜನವರಿ 25ರಂದು ‘ಪದ್ಮಾವತ್’ ಸಿನಿಮಾವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.