ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಸೇರಿದಂತೆ 55 ಸಂಸದರು ತಮ್ಮ ರಾಜ್ಯಗಳ ವಿಧಾನಸಭೆಗಳಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಆಯೋಗ ಹೇಳಿದೆ.
ಸಾಮಾನ್ಯವಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ಸದಸ್ಯರು ಸಂಸತ್ ಭವನದಲ್ಲಿ ಮತ್ತು ಶಾಸಕರು ತಮ್ಮ ರಾಜ್ಯಗಳ ವಿಧಾನಸಭೆಗಳಲ್ಲಿ ಮತದಾನ ಮಾಡುತ್ತಾರೆ.
ಪೆನ್ ಒಯ್ಯುವಂತಿಲ್ಲ: ಚುನಾವಣೆಯಲ್ಲಿ ಭಾಗವಹಿಸಲಿರುವ ಶಾಸಕರು ಮತ್ತು ಸಂಸದರು ಮತದಾನ ಕೊಠಡಿಗೆ ತಮ್ಮ ಪೆನ್ನುಗಳನ್ನು ಒಯ್ಯುವಂತಿಲ್ಲ. ಮತ ಪತ್ರದಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಗುರುತು ಹಾಕಲು ವಿಶೇಷವಾಗಿ ರೂಪಿಸಿರುವ ಮಾರ್ಕರ್ ಪೆನ್ ಅನ್ನೇ ಅವರು ಬಳಸಬೇಕು ಎಂದು ಆಯೋಗ ಹೇಳಿದೆ.
ಅಡ್ಡಮತದಾನದ ಸಾಧ್ಯತೆ
ಲಖನೌ: ಉತ್ತರ ಪ್ರದೇಶದ ವಿರೋಧ ಪಕ್ಷಗಳಾದ ಸಾಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸದಸ್ಯರು ಅಡ್ಡಮತದಾನ ಮಾಡುವ ಸಾಧ್ಯತೆ ಇದೆ.
ಎರಡೂ ಪಕ್ಷಗಳ ಕೆಲವು ಶಾಸಕರು ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಪರವಾಗಿ ಮತದಾನ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ನಿತೀಶ್ಗೇ ಮತದಾನದ ಹಕ್ಕಿಲ್ಲ!
ಪಟ್ನಾ: ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ಬೆಂಬಲಿಸಿ ಬಿಹಾರದ ಮಹಾ ಮೈತ್ರಿ ಕೂಟದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಿದ್ದ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿಲ್ಲ! ನಿತೀಶ್ ಕುಮಾರ್, ವಿಧಾನಪರಿಷತ್ ಸದಸ್ಯರಾಗಿರುವುದರಿಂದ ಅವರು ಮತಚಲಾಯಿಸುವಂತಿಲ್ಲ. ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ಸದಸ್ಯರು ಮತ್ತು ರಾಜ್ಯಗಳ ವಿಧಾನಸಭೆಗಳಿಗೆ (ದೆಹಲಿ ಮತ್ತು ಪುದುಚೇರಿಯೂ ಸೇರಿ) ಆಯ್ಕೆಯಾದ ಶಾಸಕರು ಮಾತ್ರ ಮತದಾನ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.