ADVERTISEMENT

ಕೊಲೆ ಯತ್ನ ಆರೋಪ: ತೊಗಾಡಿಯಾ ಆರೋಪಮುಕ್ತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST

ಅಹಮದಾಬಾದ್: 1996ರಲ್ಲಿ ಕೊಲೆ ಯತ್ನ ಆರೋಪದ ಪ್ರಕರಣ ಎದುರಿಸುತ್ತಿದ್ದ ವಿಶ್ವ ಹಿಂದೂ ಪರಿಷತ್‌ನ ಮುಖಂಡ ಪ್ರವೀಣ್‌ ಭಾಯಿ ತೊಗಾಡಿಯಾ ಮತ್ತು 38 ಮಂದಿಯನ್ನು ಅಹಮದಾಬಾದ್‌ ಮೆಟ್ರೊಪಾಲಿಟನ್‌ ಕೋರ್ಟ್‌ ಆರೋಪಮುಕ್ತಗೊಳಿಸಿದೆ. ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಗುಜರಾತ್‌ ಸರ್ಕಾರ ಮನವಿ ಮಾಡಿತ್ತು.

1996ರ ಮೇ 20ರಂದು ಸರ್ದಾರ್‌ ಪಟೇಲ್‌ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಪಕ್ಷದೊಳಗಿನ ಆಂತರಿಕ ಜಗಳ ವಿಕೋಪಕ್ಕೆ ತಿರುಗಿತ್ತು. ಹಿರಿಯ ನಾಯಕರಾದ ಆತ್ಮರಾಮ್ ಪಟೇಲ್‌ ಮತ್ತು ಶಂಕರ್‌ಸಿನ್ಹಾ ವಘೇಲ ಅವರ ಬೆಂಬಲಿಗರು ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ವಿರುದ್ಧ ದಂಗೆ ಎದ್ದಿದ್ದರು. ಮುಖ್ಯಮಂತ್ರಿಗಳ ಬೆಂಬಲಿಗರು ಆತ್ಮರಾಮ್‌ ಪಟೇಲ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಈ ಪ್ರಕರಣದಲ್ಲಿ ಆರೋಪಿಯಾಗಿರುವ ತೊಗಾಡಿಯಾ ಅವರ ವಿರುದ್ಧ ಅಹಮದಾಬಾದ್‌ ಮೆಟ್ರೊಪಾಲಿಟನ್‌ ಕೋರ್ಟ್‌ ಈ ತಿಂಗಳ ಆರಂಭದಲ್ಲಿ ಜಾಮೀನುರಹಿತ ವಾರಂಟ್‌ ಹೊರಡಿಸಿತ್ತು. ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ಪ್ರಕರಣವನ್ನು ವಾಪಸ್‌ ಪಡೆಯುವ ಅರ್ಜಿಯನ್ನು ಸಲ್ಲಿಸಿದರು. ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.