ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ 2018-2019 ಸಾಲಿನ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಈ ಬಜೆಟ್ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದ್ದು, ಎಲ್ಲ ವಲಯಗಳಿಗೂ ಗಮನ ಹರಿಸಲಾಗಿದೆ. ಬಜೆಟ್ ರೈತ ಸ್ನೇಹಿ, ಸಾಮಾನ್ಯ ನಾಗರಿಕ ಸ್ನೇಹಿ, ಉದ್ಯಮ ಸ್ನೇಹಿ ಮತ್ತು ಅಭಿವೃದ್ದಿ ಸ್ನೇಹಿಯಾಗಿದೆ. ಇದು ಬದುಕನ್ನು ಹಸನುಗೊಳಿಸಲು ಸಹಾಯ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.
2018ರ ಬಜೆಟ್ 1.25 ಶತಕೋಟಿ ಜನರ ಬಯಕೆ ಮತ್ತು ನಿರೀಕ್ಷೆಗಳನ್ನು ಬಲಪಡಿಸಿದೆ. ಜೇಟ್ಲಿ ಮಂಡನೆ ಮಾಡಿದ ಈ ಬಜೆಟ್ ಗ್ರಾಮೀಣ ಭಾರತದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬಗ್ಗೆ ಹಣಕಾಸು ಸಚಿವರು ತೆಗೆದುಕೊಂಡಿರುವ ನಿರ್ಧಾರವನ್ನು ನಾನು ಅಭಿನಂದಿಸುತ್ತೇನೆ. ಇದು ರೈತರಿಗೆ ಹೆಚ್ಚು ಸಹಾಯವಾಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ ಮೋದಿ.
ಮಹಿಳೆಯರಿಗಾಗಿ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸಿದ್ದು, ಟೇಕ್ ಹೋಮ್ ವೇತನ ಹೆಚ್ಚು ಮಾಡಲಾಗಿದೆ.ನೌಕರರ ಭವಿಷ್ಯ ನಿಧಿ(ಇಪಿಎಫ್ ) ದರ ಶೇ.8.33 ಇಳಿಕೆಯಾಗಿದೆ.
ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ಗ್ರಾಮಗಳನ್ನು ಗ್ರಾಮೀಣ ಸಂಪರ್ಕ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.
</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.