ಹೈದರಾಬಾದ್ : ಶಾಲಾ ಶುಲ್ಕ ಪಾವತಿಸಿಲ್ಲವೆಂದು ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಶಾಲಾ ಆಡಳಿತ ಮಂಡಳಿ ನಿರ್ಧಾರದಿಂದ ಬೇಸತ್ತ 9ನೇ ತರಗತಿ ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
‘ಶುಲ್ಕ ಪಾವತಿಸದ ವಿಚಾರವನ್ನು ಸಹಪಾಠಿಗಳ ಮುಂದೆ ವಿಷಯ ಪ್ರಸ್ತಾಪಿಸಿ ಅವಮಾನ ಮಾಡಿದರು, ಅಮ್ಮಾ ನನ್ನನ್ನು ಕ್ಷಮಿಸು’ ಎಂದು ಸಾಯಿ ದೀಪ್ತಿ ಬರೆದಿಟ್ಟಿದ್ದಾಳೆ.
‘ಶಾಲಾ ಆಡಳಿತ ಮಂಡಳಿ ಸಿಬ್ಬಂದಿಯನ್ನು ಬುಧವಾರ ಭೇಟಿಯಾಗಿದ್ದ ಬಾಲಕೃಷ್ಣ ಅವರು ಫೆಬ್ರುವರಿ ಮೊದಲ ವಾರದಲ್ಲಿ ಮಗಳ ಶಾಲಾ ಶುಲ್ಕ ₹2ಸಾವಿರ ಪಾವತಿಸುವುದಾಗಿ ತಿಳಿಸಿದ್ದರು. ಹೀಗಿದ್ದರೂ, ಇದೇ ವಿಷಯ ಪ್ರಸ್ತಾಪಿಸಿ ಶಾಲಾ ಆಡಳಿತ ಮಂಡಳಿ ಮರುದಿನ ವಿದ್ಯಾರ್ಥಿನಿಗೆ ಅವಮಾನ ಮಾಡಿದ್ದರು. ಇದರಿಂದ ತೀವ್ರ ಬೇಸರಗೊಂಡ ವಿದ್ಯಾರ್ಥಿನಿ ಸಂಜೆ 4.30ರ ವೇಳೆಗೆ ಶಾಲೆಯಿಂದ ಹಿಂತಿರುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಸುನೀತಾ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಮಗಳು ಆತ್ಮಹತ್ಯೆಗೆ ಮುಂದಾಗಿದ್ದು ಗೊತ್ತಾಗಿದೆ’ ಎಂದು ಮಲ್ಕಾಜ್ಗಿರಿ ಪೊಲೀಸರು ತಿಳಿಸಿದ್ದಾರೆ.
ಆರೋಪ ನಿರಾಕರಣೆ: ‘ಸಾಯಿದೀಪ್ತಿ ಸೇರಿದಂತೆ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿತ್ತು, ಯಾರಿಗೂ ಪರೀಕ್ಷೆ ಬರೆಯಲು ನಿರಾಕರಿಸಿರಲಿಲ್ಲ’ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.