ಹೈದರಾಬಾದ್: ಕೇಂದ್ರ ಬಜೆಟ್ನಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡದ ಅಸಮಾಧಾನದಲ್ಲಿದ್ದ ತೆಲುಗು ದೇಶಂ ಪಕ್ಷ (ಟಿಡಿಪಿ) ಇದೀಗ, ಸದ್ಯದ ಮಟ್ಟಿಗೆ ಎನ್ಡಿಎ ಮೈತ್ರಿಕೂಟದಲ್ಲೇ ಮುಂದುವರಿಯಲು ನಿರ್ಧರಿಸಿರುವುದಾಗಿ ತಿಳಿಸಿದೆ. ಆದರೆ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ, ಪಕ್ಷದ ಸಂಸದರ ಮತ್ತು ಹಿರಿಯ ನಾಯಕರ ತುರ್ತು ಸಭೆಯ ಬಳಿಕ ಸಚಿವ ವೈ.ಎಸ್. ಚೌಧರಿ ಅವರು ಈ ಮಾಹಿತಿ ನೀಡಿದ್ದಾರೆ.
‘ಬಜೆಟ್ ಮತ್ತು ಬಜೆಟ್ನಲ್ಲಿ ಆಂಧ್ರ ಪ್ರದೇಶಕ್ಕೆ ಪ್ಯಾಕೇಜ್ ನೀಡದ ಬಗ್ಗೆ ತುರ್ತು ಸಭೆಯಲ್ಲಿ ಚರ್ಚಿಸಲಾಗಿದೆ. ಪ್ಯಾಕೇಜ್ಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಲಿದ್ದೇವೆ. ಅಗತ್ಯವೆಂದೆನಿಸಿದಲ್ಲಿ ಈ ಬಗ್ಗೆ ಸಂಸತ್ತಿನಲ್ಲೂ ದನಿಯೆತ್ತಲಿದ್ದೇವೆ’ ಎಂದು ಚೌಧರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.