ADVERTISEMENT

ಪಾಕ್‌ ದಾಳಿ: ಯೋಧನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಸೋಮವಾರ ಕದನವಿರಾಮ ಉಲ್ಲಂಘನೆ ಮಾಡಿದೆ.

ಭಾರತದ ಸೇನಾ ನೆಲೆಗಳ ಮೇಲೆ ಪಾಕಿಸ್ತಾನವು ರಾತ್ರಿಯೆಲ್ಲ ನಿರಂತರ ಷೆಲ್‌ ದಾಳಿ ನಡೆಸಿತು. ಈ ವೇಳೆ ಭಾರತದ ಗಡಿ ಭದ್ರತಾ ಪಡೆಯ ಸಬ್‌ ಇನಸ್ಪೆಕ್ಟರ್‌ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ರಜೌರಿ ಜಿಲ್ಲಾಧಿಕಾರಿ ಶಾಹಿದ್‌ ಚೌಧರಿ ಹೇಳಿದ್ದಾರೆ.

ರಜೌರಿಯ ಗಡಿ ಪ್ರದೇಶದ 5 ಕಿ.ಮೀ ಒಳಗೆ ಇರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಸುರಕ್ಷತೆ ದೃಷ್ಟಿಯಿಂದ ಮೂರು ದಿನಗಳ ಕಾಲ ಮುಚ್ಚಬೇಕು ಎಂದು ಜಿಲ್ಲಾಡಳಿತ ಆದೇಶಿಸಿದೆ.

ADVERTISEMENT

ಈ ದಾಳಿ ನಡೆದ ಮುಂಚಿನ ದಿನವೂ ಇದೇ ಜಿಲ್ಲೆಯಲ್ಲಿ ಪಾಕಿಸ್ತಾನ ಷೆಲ್‌ ದಾಳಿ ನಡೆಸಿತ್ತು. ಇದರಿಂದಾಗಿ ಸೇನಾಧಿಕಾರಿ ಸೇರಿದಂತೆ ನಾಲ್ಕು ಯೋಧರು ಮೃತಪಟ್ಟಿದ್ದರೆ, ಇಬ್ಬರು ಯೋಧರು ಗಾಯಗೊಂಡಿದ್ದರು.

ಪ್ರತ್ಯುತ್ತರದ ಕ್ರಮ ಕೈಗೊಳ್ಳಲು ಸಿದ್ಧ (ನವದೆಹಲಿ ವರದಿ): ಗಡಿ ನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಿದ್ಧವಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ನಾವು ಏನನ್ನೂ ಹೇಳದೆ ಉತ್ತರ ನೀಡುತ್ತೇವೆ. ನಮ್ಮ ಕ್ರಿಯೆಯೇ ಎಲ್ಲವನ್ನೂ ಹೇಳುತ್ತದೆ’ ಎಂದು ಲೆಫ್ಟಿನೆಂಟ್‌ ಜನರಲ್‌ ಶರತ್ ಛಾಂದ್‌ ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ ಉಗ್ರರು ಅಕ್ರಮವಾಗಿ ಒಳನುಸುಳಲು ಪಾಕ್‌ ಪಡೆಗಳು ಸಹಕಾರ ನೀಡುತ್ತಿವೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.