ಕೋಲ್ಕತ್ತ: ಐಪಿಎಸ್ ಮಾಜಿ ಅಧಿಕಾರಿ ಭಾರತಿ ಘೋಷ್ ವಿರುದ್ಧ ಪಶ್ಚಿಮ ಬಂಗಾಳದ ಸಿಐಡಿ ಬಂಧನ ವಾರಂಟ್ ಜಾರಿ ಮಾಡಿದೆ.
ನಾಗರಿಕ ದುಷ್ಕೃತ್ಯ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಿಐಡಿ ಬಂಧನ ವಾರಂಟ್ ಜಾರಿ ಮಾಡಿದೆ ಎಂದು ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘೋಷ್ ಹಾಗೂ ಅವರ (ಮಾಜಿ) ಭದ್ರತಾ ಸಿಬ್ಬಂದಿ ಸುಜಿತ್ ಮೊಂಡಾಲ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದ್ದೇವೆ. ಅವರು ಎಲ್ಲೇ ಇದ್ದರು ಬಂಧಿಸಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತಿ ಘೋಷ್ ತನಿಖಾಧಿಕಾರಿಯ ಮುಂದೆ ಹಾಜರಾಗಿ ಯಾವುದೇ ಹೇಳಿಕೆ ನೀಡದ ಕಾರಣ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲಾಯಿತು ಎಂದು ಸಿಐಡಿಯ ಮತ್ತೊಂದು ಮೂಲ ತಿಳಿಸಿದೆ.
ಪಶ್ಚಿಮ ಮಿಡ್ನಾಪುರದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್ ಮಾಜಿ ಅಧಿಕಾರನ್ನು ಪತ್ತೆಹಚ್ಚಲು ತನಿಖಾ ತಂಡ ಈಗಾಗಲೇ ಕ್ರಮ ಕೈಗೊಂಡಿದೆ. ದುಷ್ಕೃತ್ಯ ಮತ್ತು ಸುಲಿಗೆ ನಡೆದಿರುವ ಆರೋಪದಲ್ಲಿ ಘೋಷ್ ಅವರಿಗೆ ಆಪ್ತರಾಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಾದ ಇನ್ಸ್ಪೆಕ್ಟರ್ ಸುಭಾಂಕರ್ ಮತ್ತು ಸಬ್ ಇನ್ಸ್ಪೆಕ್ಟರ್ ಚಿತ್ತಾ ವಾಲ್ ಅವರನ್ನು ಬಂಧಿಸಲಾಗಿದೆ.
ಪಶ್ಚಿಮ ಮಿಡ್ನಾಪುರದ ಎಸ್ಪಿಯಾಗಿದ್ದ ಘೋಷ್ ಅವರನ್ನು 2017ರ ಡಿಸೆಂಬರ್ನಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆಯ ಮೂರನೇ ಬೆಟಾಲಿಯನ್ನ ಕಮಾಂಡೆಂಟ್ ಆಗಿ ನಿಯೋಜಿಸಿ ವರ್ಗಾವಣೆ ಮಾಡಿದ ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.