ನವದೆಹಲಿ: ಬಿಜೆಪಿಯು ಪಕ್ಕಾ ದೇಶಭಕ್ತರ ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಭಾನುವಾರ ಇಲ್ಲಿ ಬಿಜೆಪಿ ಕೇಂದ್ರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷವು ಪ್ರಜಾಪ್ರಭುತ್ವದ ಮೌಲ್ಯದಲ್ಲಿ ನಂಬಿಕೆಯಿಟ್ಟಿದ್ದು, ಮೈತ್ರಿಕೂಟದ ಎಲ್ಲ ಪಕ್ಷಗಳನ್ನು ಜೊತೆಯಲ್ಲಿ ಕರೆದೊಯ್ಯಲು ಇದರಿಂದ ಸಾಧ್ಯವಾಗಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಕೊಡುಗೆಗಳನ್ನು ಅವರು ಸ್ಮರಿಸಿದರು. ವಾಜಪೇಯಿ ಅವರು ಮಿತ್ರಪಕ್ಷಗಳನ್ನು ಅವುಗಳ ಪ್ರಾದೇಶಿಕ ಆಕಾಂಕ್ಷೆಗಳ ಜೊತೆ ಕರೆದೊಯ್ಯುವಲ್ಲಿ ಯಶ ಕಂಡಿದ್ದರು. ಅವರು ದೇಶದಲ್ಲಿ ಹೊಸ ಭರವಸೆಗೆ ಕಾರಣರಾಗಿದ್ದರು ಎಂದರು.
‘ಇದೆಲ್ಲಕ್ಕೂ ಮುಖ್ಯ ಕಾರಣವೆಂದರೆ ಪ್ರಜಾಪ್ರಭುತ್ವ ಎಂಬುದು ನಮ್ಮ ರಕ್ತದಲ್ಲೇ ಇದ್ದದ್ದು. ಇದೇ ಹಾದಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಾವು ಮುಂದುವರಿಯುತ್ತಿದ್ದೇವೆ’ ಎಂದು ಮೋದಿ ಹೇಳಿದರು.
ಬಿಜೆಪಿ ಜೊತೆಗಿರುವ ಭಿನ್ನಮತವನ್ನು ಮಿತ್ರಪಕ್ಷಗಳಾದ ಟಿಡಿಪಿ, ಶಿವಸೇನೆ ಹಾಗೂ ಅಕಾಲಿ ದಳ ವ್ಯಕ್ತಪಡಿಸಿದ ಬಳಿಕ ಮೋದಿ ಅವರಿಂದ ಈ ಹೇಳಿಕೆ ಬಂದಿದೆ.
‘ಸ್ವಾತಂತ್ರ್ಯಾನಂತರ ರಾಷ್ಟ್ರೀಯ ಪಕ್ಷಗಳ ಅಗತ್ಯ ಇದ್ದಿದ್ದರಿಂದ ಭಾರತೀಯ ಜನಸಂಘ ಜನ್ಮತಾಳಿತು. ಸಂಘ ಹಾಗೂ ಪಕ್ಷದ ಎಲ್ಲ ಚಳವಳಿಗಳಲ್ಲಿ ದೇಶದ ಹಿತಾಸಕ್ತಿ ಇತ್ತು. ಇದಕ್ಕಾಗಿ ನಮಗೆಲ್ಲ ಹೆಮ್ಮೆಯಿದೆ’ ಎಂದು ಮೋದಿ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.