ಇಟಾನಗರ: ಉದ್ರಿಕ್ತರ ಗುಂಪೊಂದು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಅತ್ಯಾಚಾರ ಆರೋಪಿಗಳಿಬ್ಬರನ್ನು ಹೊರಗೆಳೆದು ನಡು ರಸ್ತೆಯಲ್ಲೇ ಹೊಡೆದು ಹತ್ಯೆ ಮಾಡಿದ ಘಟನೆ ಅರುಣಾಚಲ ಪ್ರದೇಶದ ತೆಜುನಲ್ಲಿ ನಡೆದಿದೆ.
ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಸಂಜಯ್ ಸೊಬೊರ್ ಮತ್ತು ಜಗದೀಶ್ ಲೊಹರ್ ಎಂಬುವವರನ್ನು ತೆಂಗಪನಿ ಚಹಾ ತೋಟ ಪ್ರದೇಶದಿಂದ ಭಾನುವಾರ ಬಂಧಿಸಲಾಗಿತ್ತು.
ಘಟನೆ ಬಗ್ಗೆ ಆಕ್ರೋಶ ಹೊಂದಿದ್ದ ಸ್ಥಳೀಯರ ಗುಂಪು ಕಬ್ಬಿಣದ ರಾಡ್ಗಳು, ಸಲಾಕೆಗಳು ಮತ್ತು ಸುತ್ತಿಗೆಗಳನ್ನು ಹಿಡಿದುಕೊಂಡು ಆರೋಪಿಗಳನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ ಹಾಕಿತ್ತು. ಆದರೆ, ಉದ್ರಿಕ್ತರ ಮನವಿಗೆ ಪೊಲೀಸರು ಒಪ್ಪಿರಲಿಲ್ಲ. ಇದರಿಂದ ಕುಪಿತಗೊಂಡ ಉದ್ರಿಕ್ತರು ಠಾಣೆಗೆ ನುಗ್ಗಿದ್ದಲ್ಲದೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅತ್ಯಾಚಾರ ಆರೋಪಿಗಳನ್ನು ಹೊರಗೆಳೆದು ರಸ್ತೆಯಲ್ಲಿ ಎಳೆದೊಯ್ದು ಹತ್ಯೆ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಹತ್ಯೆ ಮಾಡಿದ ನಂತರ ಮೃತದೇಹಗಳನ್ನು ಸುಟ್ಟುಹಾಕಲೂ ಉದ್ರಿಕ್ತರ ಗುಂಪು ಪ್ರಯತ್ನಿಸಿದೆ ಎನ್ನಲಾಗಿದೆ.
ಅರುಣಾಚಲ ಪ್ರದೇಶ ನಮ್ಗೊ ಎಂಬ ಗ್ರಾಮದ ಐದು ವರ್ಷದ ಬಾಲಕಿ ಇದೇ ತಿಂಗಳ 12ರಂದು ನಾಪತ್ತೆಯಾಗಿದ್ದಳು. ಇದಾದ ಕೆಲ ದಿನಗಳ ನಂತರ ತೆಂಗಪನಿ ಚಹಾ ತೋಟ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.