ನವದೆಹಲಿ: ಉದ್ಯಮಿಗಳಾದ ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಉದ್ದೇಶಕ್ಕೆ ವ್ಯಯಿಸಲಾಗಿರುವ ವೆಚ್ಚದ ಮಾಹಿತಿ ನೀಡಲು ಸಿಬಿಐ ನಿರಾಕರಿಸಿದೆ.
ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿರುವ ಲಲಿತ್ ಮೋದಿ ಮತ್ತು ₹ 9,000 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೆ ಲಂಡನ್ನಲ್ಲಿ ನೆಲೆಸಿರುವ ಮಲ್ಯ ಅವರನ್ನು ಕರೆತರುವ ಉದ್ದೇಶಕ್ಕಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂದು ಪ್ರಶ್ನಿಸಿ ಪುಣೆಯ ಮಾಹಿತಿ ಹಕ್ಕು ಹೋರಾಟಗಾರ ವಿಹಾರ್ ಧ್ರುವೆ ಹಣಕಾಸು ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಚಿವಾಲಯ ಈ ಅರ್ಜಿಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿತ್ತು.
ಅರ್ಜಿಗೆ ಉತ್ತರಿಸಿದ ಸಿಬಿಐ, ಮಾಹಿತಿ ಹಕ್ಕು ಕಾಯ್ದಗೆ (ಆರ್ಟಿಐ) ಸಂಬಂಧಿಸಿ 2011ರಲ್ಲಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ಅನ್ವಯ ಈ ಪ್ರಶ್ನೆಗೆ ಉತ್ತರಿಸಲಾಗದು ಎಂದು ಹೇಳಿದೆ.
ಕೆಲವೊಂದು ಸಂಸ್ಥೆಗಳನ್ನು ವ್ಯಾಪ್ತಿಯಿಂದ ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಆರ್ಟಿಐನ ಸೆಕ್ಷನ್ 24ರಲ್ಲಿ ಉಲ್ಲೇಖವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.