ನವದೆಹಲಿ: ಬಹುಕೋಟಿ ವಂಚನೆಯ ಆರೋಪ ಹೊತ್ತಿರುವ ಉದ್ಯಮಿಗಳಾದ ವಿಜಯ ಮಲ್ಯ ಹಾಗೂ ಲಲಿತ್ ಮೋದಿ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ಮಾಡುತ್ತಿರುವ ವೆಚ್ಚದ ವಿವರ ನೀಡಲು ಸಿಬಿಐ ಮಂಗಳವಾರ ನಿರಾಕರಿಸಿದೆ.
ಭಾರತದ ವಿವಿಧ ಬ್ಯಾಂಕ್ಗಳಿಂದ ಸುಮಾರು ₹ 9 ಸಾವಿರ ಕೋಟಿ ಸಾಲ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಯ ಲಂಡನ್ನಲ್ಲಿ ತಲೆ ಮರೆಸಿಕೊಂಡಿದ್ದು, ಹಣದ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಲಲಿತ್ ಮೋದಿ ದೇಶ ತೊರೆದಿದ್ದಾರೆ. ಪುಣೆ ಮೂಲದ ಮಾಹಿತಿ ಹಕ್ಕುಗಳ ಕಾರ್ಯಕರ್ತ ವಿಹಾರ್ ಧ್ರುವೆ ಎನ್ನುವವರು ಮಾಹಿತಿ ಹಕ್ಕು ಕಾಯ್ದೆ ಅಡಿ ಖರ್ಚಿನ ಪ್ರಶ್ನೆ ಕೇಳಿದ್ದರು.
ಕೇಂದ್ರ ಹಣಕಾಸು ಸಚಿವಾಲಯಕ್ಕೆ ಅವರು ಅರ್ಜಿ ಸಲ್ಲಿಸಿದ್ದರು. ಅದನ್ನು ಸಚಿವಾಲಯವು ಸಿಬಿಐ ಕಚೇರಿಗೆ ಕಳುಹಿಸಿತ್ತು. ಸಿಬಿಐ ಆ ಅರ್ಜಿಯನ್ನು ಪ್ರಕರಣದ ತನಿಖೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ರವಾನೆ ಮಾಡಿತ್ತು. ಈಗ ಉತ್ತರ ನೀಡಿರುವ ಸಿಬಿಐ 2011 ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ತನಿಖಾ ಹಂತದಲ್ಲಿರುವ ಪ್ರಕರಣಗಳ ಕುರಿತ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಾಯ್ದೆಯ 24ನೇ ಕಲಮಿನ ಅನ್ವಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಕೆಲ ವಿಶೇಷ ಪ್ರಕರಣಗಳ ಮಾಹಿತಿ ನೀಡಲು ನಿರಾಕರಿಸಬಹುದು ಎಂಬ ಅಂಶವನ್ನು ಸಿಬಿಐ ಉಲ್ಲೇಖ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.