ADVERTISEMENT

ಲಂಚ ನೀಡಿದರಷ್ಟೇ ವಹಿವಾಟಿಗೆ ಅನುಮತಿ: ಲೋಕಲ್‌ ಸರ್ಕಲ್‌ ಸಂಸ್ಥೆ ವರದಿ

ಪಿಟಿಐ
Published 8 ಡಿಸೆಂಬರ್ 2024, 15:51 IST
Last Updated 8 ಡಿಸೆಂಬರ್ 2024, 15:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸೇವೆಯು ಡಿಜಿಟಲೀಕರಣಗೊಂಡಿದೆ. ವಿಳಂಬ ತಪ್ಪಿಸಲು ಏಕ ಗವಾಕ್ಷಿ ಪದ್ಧತಿ ಅನುಷ್ಠಾನಗೊಂಡಿದೆ. ಕ್ಲೇಮು ಪಡೆಯಲು ಅಮೌಖಿಕ ಮೌಲ್ಯಮಾಪನ (ಫೇಸ್‌ಲೆಸ್‌ ಅಸೆಸ್‌ಮೆಂಟ್) ವ್ಯವಸ್ಥೆ ರೂಪಿಸಲಾಗಿದೆ. ಆದರೂ, ಕಚೇರಿಗಳಲ್ಲಿ ಭ್ರಷ್ಟಾಚಾರ ಮುಂದುವರಿದಿದೆ ಎಂದು ಲೋಕಲ್‌ ಸರ್ಕಲ್‌ ಸಂಸ್ಥೆ ವರದಿ ತಿಳಿಸಿದೆ.

ಲಂಚದ ಹಾವಳಿ ತಡೆಗೆ ಹಲವು ಕ್ರಮಕೈಗೊಂಡಿದ್ದರೂ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂವರು ಉದ್ಯಮಿಗಳ ಪೈಕಿ ಇಬ್ಬರು ಉದ್ಯಮಿಗಳು ತಮ್ಮ ಯೋಜನೆಗಳಿಗೆ ಒಪ್ಪಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಹೇಳಿದೆ. 

ಸಂಸ್ಥೆಯು ದೇಶದ 159 ಜಿಲ್ಲೆಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಈ ಸಂಗತಿ ಬಯಲಿಗೆ ಬಂದಿದೆ. ಸಮೀಕ್ಷೆಯಲ್ಲಿ 18 ಸಾವಿರ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.

ADVERTISEMENT

ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಕಂಪನಿಗಳ ಪೈಕಿ ಶೇ 66ರಷ್ಟು ಕಂಪನಿಗಳು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿವೆ. ಈ ಪೈಕಿ ಶೇ 41ರಷ್ಟು ಕಂಪನಿಗಳು ಕಚೇರಿಗಳಲ್ಲಿ ಸರಾಗವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಹಲವು ಬಾರಿ ಲಂಚ ನೀಡಿವೆ. ಶೇ 21ರಷ್ಟು ಕಂಪನಿಗಳು ಒಂದು ಅಥವಾ ಎರಡು ಬಾರಿ ಲಂಚ ನೀಡಿವೆ ಎಂದು ವಿವರಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಯೋಜನೆಗೆ ಒಪ್ಪಿಗೆ, ವಹಿವಾಟಿಗೆ ಅನುಮತಿ ಪಡೆಯಲು, ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿಯ ನಕಲಿ ಪ್ರತಿ ಪಡೆಯಲು ಲಂಚ ನೀಡಿವೆ ಎಂದು ಹೇಳಿದೆ.

ಕಾನೂನು, ಮಾಪನಶಾಸ್ತ್ರ, ಆಹಾರ, ಔಷಧ, ಆರೋಗ್ಯ ಇಲಾಖೆ, ಜಿಎಸ್‌ಟಿ ಅಧಿಕಾರಿಗಳು, ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ಪುರಸಭೆ ಮತ್ತು ವಿದ್ಯುತ್‌ ಕಚೇರಿಗಳ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.