ADVERTISEMENT

ಅಧಿವೇಶನದಲ್ಲಿ ಅದಾನಿ ವಿಷಯ ಚರ್ಚೆಗೆ ಸರ್ವಪಕ್ಷಗಳ ಕೋರಿಕೆ

ಐಎಎನ್ಎಸ್
Published 30 ಜನವರಿ 2023, 12:55 IST
Last Updated 30 ಜನವರಿ 2023, 12:55 IST
   

ನವದೆಹಲಿ: ನಾಳೆಯಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅದಾನಿ ವಿವಾದ ಮತ್ತು ಹಿಂಡೆನ್‌ಬರ್ಗ್‌ನ ವರದಿಯ ಕುರಿತು ಚರ್ಚಿಸಬೇಕೆಂದು ಆಮ್‌ ಆದ್ಮಿ ಸೇರಿದಂತೆ ಹಲವು ಪಕ್ಷಗಳು ಒತ್ತಾಯಿಸಿವೆ.

ಬಜೆಟ್ ಅಧಿವೇಶನದ ಮುನ್ನಾದಿನವಾದ ಸೋಮವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಯಿತು. ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ನ ವರದಿ ಕುರಿತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ವರದಿಯಿಂದಾಗಿ ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆ ಗಣನೀಯವಾಗಿ ಕುಸಿದಿದೆ.

ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಅದಾನಿ-ಹಿಂಡೆನ್‌ಬರ್ಗ್ ವಿವಾದ ಚರ್ಚಿಸಲು ಸರ್ಕಾರವನ್ನು ಒತ್ತಾಯಿಸಿರುವುದಾಗಿ ಹೇಳಿದರು.

ADVERTISEMENT

ಆರ್‌ಜೆಡಿ, ಸಿಪಿಐ, ಸಿಪಿಐಎಂ ಮತ್ತು ಡಿಎಂಕೆಯಂತಹ ಪಕ್ಷಗಳು ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ಚರ್ಚೆಗೆ ಕೋರಿವೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‌ ಈ ಸಭೆಯಿಂದ ಹೊರಗುಳಿದಿತ್ತು.

ಅದಾನಿ ವಿಷಯ ವ್ಯಾಪಾರ ಸಲಹಾ ಸಮಿತಿಯ (ಬಿಎಸಿ) ಎದುರು ಬಂದರೆ, ಅದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸುದೀಪ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ವಿಷಯವನ್ನು ಟಿಎಂಸಿ ಸರ್ವಪಕ್ಷಗಳ ಸಭೆಯಲ್ಲಿ ಪ್ರಸ್ತಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.