ನವದೆಹಲಿ: ಸಂಘಟಿತ ಅಪರಾಧದಲ್ಲಿ ಹಿಂಸಾಚಾರ ನಡೆಯದಿದ್ದರೂ ಸಹ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಮೊಕಾ) ಅನ್ನು ಅನ್ವಯಿಸಬಹುದು. ಹಿಂಸಾಚಾರದ ಬೆದರಿಕೆ ಇದ್ದರೂ ಸಹ ಮೊಕಾದಡಿ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ವಿಭಾಗೀಯ ಪೀಠವು, ’ಯಾವುದೇ ವ್ಯಕ್ತಿ ಅಥವಾ ಒಂದು ಗುಂಪು ನಡೆಸಿದ ಸಂಘಟಿತ ಕಿಡಿಗೇಡಿ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊಕಾ ಕಾಯ್ದೆ ಹೇರಿಕೆಗೆ ಹಿಂಸಾಚಾರ ನಡೆದಿರಬೇಕೆಂಬ ಷರತ್ತು ಇಲ್ಲ. ಬೆದರಿಕೆ ಮತ್ತು ಬಲವಂತಪಡಿಸುವುದು ಸಹ ಸಂಘಟಿತ ಅಪರಾಧವೇ’ ಎಂದಿದೆ.
ಅಭಿಷೇಕ್ ಎಂಬುವವರು ತಮ್ಮ ವಿರುದ್ಧ ಹೇರಲಾಗಿದ್ದ ಮೊಕಾ ಕಾಯ್ದೆ ಹಿಂಪಡೆಯಲು ನಿರಾಕರಿಸಿದ ಬಾಂಬೆ ಹೈಕೋರ್ಟ್ನ ನಾಗಪುರ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
2020ರ ಮೇನಲ್ಲಿ ನಾಗಪುರದಲ್ಲಿನ ರೆಸ್ಟೋರೆಂಟ್ ಮಾಲೀಕನನ್ನು ಅಪಹರಿಸಿ ₹ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಅಭಿಷೇಕ್ ಮತ್ತು ಇತರರ ಮೇಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.