ನವದೆಹಲಿ: ಬೇಡಿಕೆ ಈಡೇರಿಸಲು ಆಗ್ರಹಿಸಿ ನವದೆಹಲಿ ಏಮ್ಸ್ ಶುಶ್ರೂಷಕರ ಒಕ್ಕೂಟ ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದೆ.
ಮುಷ್ಕರದ ಕುರಿತು ಏಮ್ಸ್ ಆಡಳಿತಕ್ಕೆ ಭಾನುವಾರ ನೋಟಿಸ್ ನೀಡಲಾಗಿತ್ತು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿಯು ಆ ಕುರಿತು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶುಶ್ರೂಷಕರ ಒಕ್ಕೂಟವು ಆರೋಪಿಸಿದೆ.
ಆರನೇ ಕೇಂದ್ರ ವೇತನ ಆಯೋಗದ ಅನುಷ್ಠಾನ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಕೈಗೊಳ್ಳಲಾಗಿದೆ. ಅಕ್ಟೋಬರ್ 16ರಂದು ಕೇಂದ್ರ ಆರೋಗ್ಯ ಸಚಿವರೊಂದಿಗೆ ನಡೆದಿದ್ದ ಸಭೆಯಲ್ಲಿ 6ನೇ ಕೇಂದ್ರ ವೇತನ ಆಯೋಗದ ಅನುಷ್ಠಾನದ ಬೇಡಿಕೆಗೆ ಸಮ್ಮತಿಸಿದ್ದರು. ಆದರೆ, ಏಮ್ಸ್ ಆಡಳಿತ ಅದರ ಅನುಷ್ಠಾನಗೊಳಿಸಿಲ್ಲ ಎಂದು ಒಕ್ಕೂಟ ಹೇಳಿದೆ.
ಶುಶ್ರೂಷಕರು ಮುಷ್ಕರ ಘೋಷಿಸುತ್ತಿದ್ದಂತೆ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ವಿಡಿಯೊ ಸಂದೇಶ ಪ್ರಕಟಿಸಿದ್ದಾರೆ. ಅದರಲ್ಲಿ ಆಧುನಿಕ ನರ್ಸಿಂಗ್ ಪದ್ಧತಿಯನ್ನು ಆರಂಭಿಸಿದ ಫ್ಲೋರೆನ್ಸ್ ನೈಟಿಂಗೇಲ್ ಅವರ ಕುರಿತು ಪ್ರಸ್ತಾಪಿಸಿ, ಕೋವಿಡ್ ಸಮಯದಲ್ಲಿ ಶುಶ್ರೂಷಕರ ಕರ್ತವ್ಯದ ಕುರಿತು ನೆನಪು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಮುಷ್ಕರ ನಡೆಸದಂತೆ ಅವರು ಆಗ್ರಹಿಸಿರುವುದಾಗಿ ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.