ADVERTISEMENT

ಆರ್‌ಎಲ್‌ಡಿಗೆ ಅಜಿತ್‌ ಸಿಂಗ್‌ ಪುತ್ರ ಜಯಂತ್‌ ನೂತನ ಸಾರಥಿ

ಪಿಟಿಐ
Published 25 ಮೇ 2021, 9:14 IST
Last Updated 25 ಮೇ 2021, 9:14 IST
ಆರ್‌ಎಲ್‌ಡಿಯ ಜಯಂತ್‌ ಚೌಧರಿ
ಆರ್‌ಎಲ್‌ಡಿಯ ಜಯಂತ್‌ ಚೌಧರಿ   

ನವದೆಹಲಿ: ಜಯಂತ್‌ ಚೌಧರಿ ಅವರು ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ನೂತನ ರಾಷ್ಟ್ರಾಧ್ಯಕ್ಷರಾಗಿ ಮಂಗಳವಾರ ನೇಮಕಗೊಂಡಿರುವುದಾಗಿ ಪಕ್ಷದ ಪ್ರಕಟಣೆ ತಿಳಿಸಿದೆ.

ಪಕ್ಷದ ಅಧ್ಯಕ್ಷ ಮತ್ತು ಜಯಂತ್‌ ಅವರ ತಂದೆ ಅಜಿತ್‌ ಸಿಂಗ್‌ ಅವರು ಮೇ 6ರಂದು ಕೋವಿಡ್‌–19ನಿಂದ ಮೃತಪಟ್ಟರು. ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಕೇಂದ್ರ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಪಕ್ಷದ ಉಪಾಧ್ಯಕ್ಷರಾಗಿದ್ದ 42 ವರ್ಷ ವಯಸ್ಸಿನ ಜಯಂತ್‌ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

'ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ತ್ರಿಲೋಕ್‌ ತ್ಯಾಗಿ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಜಯಂತ್‌ ಹೆಸರು ಪ್ರಸ್ತಾಪಿಸಿದರು. ಮಾಜಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುನ್ಶಿರಾಮ್‌ ಪಾಲ್‌ ಪ್ರಸ್ತಾವನೆಯನ್ನು ಅನುಮೋದಿಸಿದರು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದ ಬೆಂಬಲ ನೀಡಿದರು' ಎಂದು ಪ್ರಕಟಣೆಯಲ್ಲಿದೆ.

ADVERTISEMENT

ಪಕ್ಷದ ನೇತಾರರಾದ ಚೌಧರಿ ಚರಣ್ ಸಿಂಗ್‌ ಮತ್ತು ಅಜಿತ್‌ ಸಿಂಗ್‌ ಅವರ ಹಾದಿಯಲ್ಲಿ ಸಾಗುವುದಾಗಿ ಜಯಂತ್‌ ಚೌಧರಿ ಹೇಳಿದ್ದಾರೆ. ಲೋಕಸಭೆಯ ಮಾಜಿ ಸಂಸದ ಜಯಂತ್‌, ದೆಹಲಿ ವಿಶ್ವವಿದ್ಯಾಲಯದ ಪದವೀಧರ. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಆ್ಯಂಡ್‌ ಪೊಲಿಟಿಕಲ್‌ ಸೈನ್ಸ್‌ನಿಂದ 'ಅಕೌಂಟಿಂಗ್‌ ಆ್ಯಂಡ್‌ ಫೈನಾನ್ಸ್‌ ' ವಿಷಯದಲ್ಲಿ 2002ರಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.