ಲಖನೌ: 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಜನರೊಂದಿಗೆ ಸಂಪರ್ಕ ಸಾಧಿಸುವ ಗುರಿ ಹೊಂದಿರುವ ಸಮಾಜವಾದಿ ಪಕ್ಷವು (ಎಸ್ಪಿ) ಅ. 12ರಿಂದ ‘ಸಮಾಜವಾದಿ ವಿಜಯ್ ಯಾತ್ರಾ’ ಆರಂಭಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಘೋಷಿಸಿದ್ದಾರೆ.
‘ಬಿಜೆಪಿ ಸರ್ಕಾರದ ಭ್ರಷ್ಟ, ನಿರಂಕುಶ ಮತ್ತು ದಮನಕಾರಿ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ಈ ಯಾತ್ರೆಯ ಉದ್ದೇಶವಾಗಿದೆ’ ಎಂದು ಎಸ್ಪಿ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.
‘ರಾಜ್ಯದಲ್ಲಿನ ಅಮಾನವೀಯ ಸರ್ಕಾರವನ್ನು ಕಿತ್ತೊಗೆಯಲು ಪಕ್ಷದ ಮುಖ್ಯಸ್ಥರಾದ ಅಖಿಲೇಶ್ ಯಾದವ್ ಅವರು ಅ. 12ರಿಂದ ಸಮಾಜವಾದಿ ವಿಜಯ್ ಯಾತ್ರೆಯನ್ನು ಕೈಗೊಳ್ಳುವರು. ಅಖಿಲೇಶ್ ಅವರು ಈ ಹಿಂದೆ ರಾಜ್ಯದಲ್ಲಿ ಬದಲಾವಣೆಗಾಗಿ 2001ರ ಜುಲೈ 31ರಂದು ‘ಕ್ರಾಂತಿ ಯಾತ್ರೆ’ ಹಾಗೂ 2011ರ ಸೆ. 12ರಂದು ‘ಸಮಾಜವಾದಿ ಪಕ್ಷದ ಕ್ರಾಂತಿರಥ ಯಾತ್ರೆ ಕೈಗೊಂಡಿದ್ದರು’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪಕ್ಷವು ಯಾತ್ರೆಯ ಮಾರ್ಗದ ವಿವರಗಳನ್ನು ಇನ್ನೂ ಹಂಚಿಕೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.