ನಾರಾಯಣಪುರ: ಪೊಲೀಸರ ಮಾಹಿತಿದಾರ ಎಂಬ ಶಂಕೆಯ ಮೇರೆಗೆ ಆ್ಯಂಬುಲೆನ್ಸ್ ಚಾಲಕನನ್ನು ನಕ್ಸಲರು ಹತ್ಯೆಗೈದಿರುವ ಘಟನೆ ಛತ್ತೀಸ್ಗಡದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.
‘ಜೈರಾಮ್ ಉಸೇಂದಿ(35) ಎಂಬವರನ್ನು ಟೆಕಾನರ್ ಗ್ರಾಮದಲ್ಲಿ ಶುಕ್ರವಾರ ಹತ್ಯೆಗೈಯಲಾಗಿದೆ. ಆತ ತನ್ನ ಸಹೋದರನೊಂದಿಗೆ ಸ್ಥಳೀಯ ಮಾರುಕಟ್ಟೆಗೆ ಹೋದ ವೇಳೆ ಈ ಘಟನೆ ನಡೆದಿದೆ. ನಕ್ಸಲರು ಜೈರಾಮ್ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ. ಬಳಿಕ ಚೂಪಾದ ಶಸ್ತ್ರದಿಂದ ಆತನನ್ನು ಹತ್ಯೆಗೈದಿದ್ದಾರೆ. ಈ ವೇಳೆ ಜೈರಾಮ್ನೊಂದಿಗಿದ್ದ ಸಹೋದರ, ನಕ್ಸಲರಿಂದ ತಪ್ಪಿಸಿಕೊಂಡಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಜೈರಾಮ ಮೂಲತಃ ಮಕಸೋಲಿಯ ನಿವಾಸಿ. ಆದರೆ ನಕ್ಸಲರು ಆತನ ಕುಟುಂಬದವರ ಮೇಲೆ ದಾಳಿ ನಡೆಸಿದ್ದರಿಂದ ಆತ 2014 ರಲ್ಲಿ ಮಕಸೋಲಿಯಿಂದ ಧನೋರಾಗೆ ಸ್ಥಳಾಂತರಗೊಂಡರು. ಈ ಬಳಿಕ ಧನೋರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.