ADVERTISEMENT

ರಾಹುಲ್ ನಾಲಗೆ ಸುಡಬೇಕು: ಬಿಜೆಪಿ ಸಂಸದ ಅನಿಲ್ ಬೊಂಡೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 14:14 IST
Last Updated 18 ಸೆಪ್ಟೆಂಬರ್ 2024, 14:14 IST
ರಾಹುಲ್ ಗಾಂಧಿ ಮತ್ತು ಬಿಜೆಪಿ ಚಿಹ್ನೆ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ ಮತ್ತು ಬಿಜೆಪಿ ಚಿಹ್ನೆ (ಸಂಗ್ರಹ ಚಿತ್ರ)   

ಮುಂಬೈ: ಮೀಸಲಾತಿಯ ವಿಚಾರವಾಗಿ ಅಮೆರಿಕದಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಲಗೆಯನ್ನು ಸುಟ್ಟುಹಾಕಬೇಕು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಅನಿಲ್ ಬೊಂಡೆ ಹೇಳಿದ್ದಾರೆ.

ಶಿವಸೇನಾ ಶಾಸಕ ಸಂಜಯ್ ಗಾಯಕವಾಡ್ ಅವರು ಕೂಡ ರಾಹುಲ್ ಅವರನ್ನು ಉದ್ದೇಶಿಸಿದ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ‘ಗಾಯಕವಾಡ್ ಅವರು, ರಾಹುಲ್ ಅವರ ನಾಲಗೆಯನ್ನು ಕತ್ತರಿಸಿಹಾಕುವುದಾಗಿ ಹೇಳಿರುವುದು ಸರಿಯಲ್ಲ... ರಾಹುಲ್ ಗಾಂಧಿ ಅವರು ಮೀಸಲಾತಿಯ ಬಗ್ಗೆ ಆಡಿರುವ ಮಾತುಗಳು ಆಘಾತಕಾರಿ. ವಿದೇಶಕ್ಕೆ ಹೋಗಿ ಮೂರ್ಖರಂತೆ ಮಾತನಾಡಿದರೆ ಅಂಥವರ ನಾಲಗೆಯನ್ನು ಸುಡಬೇಕು’ ಎಂದು ಬೊಂಡೆ ಹೇಳಿದ್ದಾರೆ.

ಬೊಂಡೆ ಅವರು ಹೇಳಿರುವುದು ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಮುಜುಗರ ಉಂಟುಮಾಡಿದೆ. ಬೊಂಡೆ ಮತ್ತು ಗಾಯಕವಾಡ್ ಅವರು ಆಡಿರುವ ಮಾತುಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಾವನಕುಲೆ ಹೇಳಿದ್ದಾರೆ.

ADVERTISEMENT

ಬಿಜೆಪಿಯು ಮಹಾರಾಷ್ಟ್ರ ರಾಜಕಾರಣವನ್ನು ಕೊಳಕು ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ಥೋರಟ್ ಆರೋಪಿಸಿದ್ದಾರೆ. 

‘ಬಿಜೆಪಿ ಹಾಗೂ ಅವರ ಮೈತ್ರಿಕೂಟದ ನಾಯಕರು ಮಾನಸಿಕವಾಗಿ ರೋಗಗ್ರಸ್ತರಾಗಿರುವಂತೆ ಕಾಣುತ್ತಿದೆ. ಅವರಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ. ಮೊದಲು, ಶಾಸಕ ಸಂಜಯ್ ಗಾಯಕವಾಡ್ ಅವರು, ಈಗ ಸಂಸದ ಅನಿಲ್ ಬೊಂಡೆ ಅವರು ರಾಹುಲ್ ಉದ್ದೇಶಿಸಿ ಹಿಂಸಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬೊಂಡೆ ಮತ್ತು ಗಾಯಕವಾಡ್ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಎನ್‌ಸಿಪಿ (ಶರದ್ ಪವಾರ್) ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.