ನವದೆಹಲಿ: ‘ಪಾಕಿಸ್ತಾನ ಸೇನೆಯು ಯಾವುದೇ ರೀತಿಯ ದುಸ್ಸಾಹಸಕ್ಕೆ ಮುಂದಾದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶನಿವಾರ ಎಚ್ಚರಿಕೆ ನೀಡಿದರು.
‘ಕಾರ್ಗಿಲ್ ಯುದ್ಧದ 20 ವರ್ಷಗಳ ನಂತರ’ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಅಥವಾ ಗಡಿಯಲ್ಲಿ ಒಳನುಸುಳುವಿಕೆಯಂಥ ದುಸ್ಸಾಹಸಗಳಿಗೆ ಪಾಕಿಸ್ತಾನ ಸೇನೆ ಆಗಾಗ ಮುಂದಾಗುತ್ತಿದೆ. ದೇಶದ ಗಡಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ. ದುಸ್ಸಾಹಸಕ್ಕೆ ಮುಂದಾದರೆ ಹಿಮ್ಮೆಟ್ಟಿಸುವುದು ಖಚಿತ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
‘ಭಯೋತ್ಪಾದನೆಯ ಪ್ರತಿ ಯೊಂದು ಘಟನೆಗೂ ಸರಿಯಾದ ದಂಡನೆ ನೀಡುತ್ತೇವೆ. ಉರಿ ಮತ್ತು ಬಾಲಾಕೋಟ್ ಘಟನೆಗಳ ನಂತರ ನಡೆದ ಸರ್ಜಿಕಲ್ ಸ್ಟ್ರೈಕ್ಗಳು ಭಯೋತ್ಪಾದನೆ ವಿರುದ್ಧ ದೇಶದ ರಾಜಕೀಯ ನಿಲುವನ್ನು ಸ್ಪಷ್ಟವಾಗಿ ಅಭಿವ್ಯಕ್ತಪಡಿಸಿದೆ ಎಂದು ಜನರಲ್ ಬಿಪಿಎನ್ ರಾವತ್ ಪ್ರತಿಪಾದಿಸಿದರು.
ಚೀನಾ ನುಸುಳುವಿಕೆ ಇಲ್ಲ
‘ಲಡಾಖ್ನ ಡೆಮ್ಚೊಕ್ ವಲಯದಲ್ಲಿ ಚೀನಾದ ಯೋಧರು ಒಳನುಸುಳುವಿಕೆ ನಡೆಸಿಲ್ಲ’ ಎಂದು ರಾವತ್ ಸ್ಪಷ್ಟಪಡಿಸಿದರು. ದಲೈಲಾಮಾ ಜನ್ಮದಿನದ ನಿಮಿತ್ತ ಜುಲೈ 6ರಂದು ಟಿಬೆಟಿಯನ್ನರಿಂದ ಧ್ವಜಾರೋಹಣ ನಡೆದ ಬಳಿಕ ಚೀನಾ ಯೋಧರು ಒಳನುಸುಳುವ ಪ್ರಯತ್ನ ನಡೆಸಿದ್ದರು ಎಂಬ ವರದಿಗಳ ಹಿಂದೆಯೇ ಈ ಹೇಳಿಕೆ ಹೊರಬಿದ್ದಿದೆ.
‘ಡೆಮ್ಚೊಕ್ ವಲಯದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಚೀನಿ ಯೋಧರು ಅವರ ಮಿತಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಟಿಬೆಟಿಯನ್ನರ ಸಂಭ್ರಮದ ವೇಳೆ ಏನಾಗುತ್ತಿದೆ ಎಂದು ಗಮನಿಸಲು ಚೀನಾದ ಕೆಲವರು ಬಂದಿದ್ದರು. ಆದರೆ, ಒಳನುಸುಳುವಿಕೆ ನಡೆದಿಲ್ಲ’ ಎಂದು ವಿವರಣೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.