ADVERTISEMENT

ಪುಲ್ವಾಮಾ ದಾಳಿ ಸ್ಥಳದಿಂದ 27ಕಿಮೀ ದೂರದಲ್ಲಿ ಸೇನೆಯ ಬೆಂಗಾವಲು ವಾಹನದ ಮೇಲೆ ದಾಳಿ

ಪಿಟಿಐ
Published 18 ಜೂನ್ 2019, 3:53 IST
Last Updated 18 ಜೂನ್ 2019, 3:53 IST
ಅನಂತನಾಗ್‌ ಜಿಲ್ಲೆಯ ಅಚಬಲ್‌ ಪ್ರದೇಶದ ಬಿದೂರು ಗ್ರಾಮದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಯೋಧರು. ಚಿತ್ರ: ಪಿಟಿಐ
ಅನಂತನಾಗ್‌ ಜಿಲ್ಲೆಯ ಅಚಬಲ್‌ ಪ್ರದೇಶದ ಬಿದೂರು ಗ್ರಾಮದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಯೋಧರು. ಚಿತ್ರ: ಪಿಟಿಐ   

ಶ್ರೀನಗರ: ಸೇನಾಪಡೆಯ ಬೆಂಗಾವಲು ವಾಹನವನ್ನು ಗುರಿಯಾಗಿಸಿ ಸೋಮವಾರ ಉಗ್ರರು ಸುಧಾರಿತ ಸ್ಫೋಟಕ ಬಳಸಿ (ಐಇಡಿ) ನಡೆಸಿದ ದಾಳಿಯಲ್ಲಿಒಂಬತ್ತು ಯೋಧರು ಗಾಯಗೊಂಡಿದ್ದಾರೆ.ಉಳಿದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ಪುಲ್ವಾಮಾ ಜಿಲ್ಲೆಯ ಅರಿಹಲ್-ಲಸ್ಸಿಪೊರಾ ರಸ್ತೆಯಲ್ಲಿ ಸಂಜೆ 6ರ ವೇಳೆಗೆಈ ದಾಳಿ ನಡೆದಿದೆ.

ರಾಷ್ಟ್ರೀಯ ರೈಫಲ್‌ ಪಡೆಯ ಯೋಧರು ಸ್ಫೋಟಕ ಪ್ರತಿರೋಧ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನದಡಿ ಐಇಡಿ ಸ್ಫೋಟಗೊಂಡಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸ್ಫೋಟ ಸಂಭವಿಸುತ್ತಿದ್ದಂತೆಯೇ ಸೇನಾಪಡೆ ಸಿಬ್ಬಂದಿ ಕಾರ್ಯೋನ್ಮುಖರಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

‘ಇದು ಉಗ್ರರು ನಡೆಸಿದ ವಿಫಲ ಯತ್ನ’ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯ ಹೇಳಿದ್ದಾರೆ.

ಫೆ.14ರಂದು ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದ ಸ್ಥಳದಿಂದ 27 ಕಿಲೊಮೀಟರ್‌ ದೂರದಲ್ಲಿ ಉಗ್ರರು ಎಲ್‌ಇಡಿ ಸ್ಫೋಟಕ ಬಳಸಿ ದಾಳಿ ನಡೆಸಿದ್ದಾರೆ.

ಪುಲ್ವಾಮದಲ್ಲಿ ಐಇಡಿ ಬಳಸಿಯೇ ದಾಳಿ ನಡೆಯುವ ಬಗ್ಗೆ ನಿನ್ನೆಯಷ್ಟೇ ಪಾಕಿಸ್ತಾನವು ಭಾರತ ಮತ್ತು ಅಮೆರಿಕಕ್ಕೆ ಮಾಹಿತಿ ರವಾನಿಸಿತ್ತು. ಅದರ ಬೆನ್ನಿಗೇ ಈ ದಾಳಿ ನಡೆದಿದೆ. ಇದೇ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರಿ ಭಾನುವಾರದಿಂದಲೂ ಕಟ್ಟೆಚ್ಚರ ವಿಧಿಸಲಾಗಿತ್ತು.

‘ಅಲ್‌ಖೈದಾದ ಕಮಾಂಡರ್‌ ಬುರ್ಹಾನ್ ಎಂಬುವವನೊಂದಿಗೆ ಸಂಪರ್ಕ ಹೊಂದಿದ್ದ ಜಾಕಿರ್‌ ಮೌಸಾ ಎಂಬಾತನನ್ನು ಭದ್ರತಾ ಸಿಬ್ಬಂದಿ ಮೇ 24ರಂದು ಪುಲ್ವಾಮದ ತ್ರಾಲ್‌ ಎಂಬಲ್ಲಿ ಎನ್‌ಕೌಂಟರ್‌ನಲ್ಲಿ ಕೊಂದಿದ್ದರು. ಇದಕ್ಕೆ ಪ್ರತಿಕಾರವಾಗಿ ಉಗ್ರರು ದಾಳಿ ನಡೆಸಲು ಹೊಂಚು ಹಾಕಿದ್ದಾರೆ. ಆವಂತಿಪುರ ಮತ್ತು ಪುಲ್ವಾಮ ಪಟ್ಟಣಗಳಲ್ಲಿ ಅತ್ಯಾಧುನಿಕ ಸ್ಫೋಟಕಗಳನ್ನು (ಐಇಡಿ) ವಾಹನಗಳ ಮೂಲಕ ತಂದು ಸ್ಫೋಟಿಸುವುದು ಉಗ್ರರ ಯೋಜನೆಯಾಗಿದೆ,’ ಎಂದು ಪಾಕಿಸ್ತಾನವು ಭಾನುವಾರ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿತ್ತು.

ದಾಳಿಯ ಬಗ್ಗೆ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್‌ ಕಚೇರಿಗೆ ಮಾಹಿತಿ ರವಾನಿಸಲಾಗಿತ್ತು. ಪಾಕಿಸ್ತಾನ ಇದೇ ಮಾಹಿತಿಯನ್ನು ಅಮೆರಿಕದೊಂದಿಗೂ ಹಂಚಿಕೊಂಡಿದೆ.

ಇದೇ ವರ್ಷದ ಫೆಬ್ರವರಿ 14ರಂದು ವಾಹನದಲ್ಲಿ ಸ್ಫೋಟಗಳನ್ನು ತಂದು ಪುಲ್ವಾಮದಲ್ಲಿ ಉಗ್ರಗಾಮಿಗಳು ವಿಧ್ವಂಸಕ ಕೃತ್ಯ ಎಸಗಿದ್ದರು. ಈ ಘಟನೆಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.