ಅಲಹಾಬಾದ್: ಪಂಚಾಯಿತಿ ಚುನಾವಣೆ ವೇಳೆ ಕೋವಿಡ್ನಿಂದ ಮೃತಪಟ್ಟ ಚುನಾವಣಾ ಅಧಿಕಾರಿಗಳ ಕುಟುಂಬಗಳಿಗೆ ನೀಡಲಾಗುವ ಪರಿಹಾರಧನದ ಮೊತ್ತವನ್ನು ಮರುಪರಿಶೀಲಿಸಬೇಕು, ಈ ಮೊತ್ತ ಕನಿಷ್ಠ ₹ 1 ಕೋಟಿಯಷ್ಟಾದರೂ ಇರಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಕ್ವಾರಂಟೈನ್ ಕೇಂದ್ರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಅದರ ವಿಚಾರಣೆ ವೇಳೆ ನ್ಯಾಯಾಲಯ ಈ ವಿಷಯ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸಿದ್ದಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರ ಪೀಠವು,‘ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗವು ಆರ್ಟಿ-ಪಿಸಿಆರ್ ಪರೀಕ್ಷೆ ಇಲ್ಲದೆ ಚುನಾವಣಾ ಅಧಿಕಾರಿಗಳನ್ನು ಕಾರ್ಯನಿರ್ವಹಿಸುವಂತೆ ಮಾಡಿದೆ. ಹಾಗಾಗಿ ಕರ್ತವ್ಯ ನಿರತರಾಗಿದ್ದಾಗ ಕೋವಿಡ್ನಿಂದ ಮೃತಪಟ್ಟ ಚುನಾವಣಾ ಅಧಿಕಾರಿಗಳ ಕುಟುಂದವರಿಗೆ ಕನಿಷ್ಠ ₹1 ಕೋಟಿಯಷ್ಟು ಪರಿಹಾರ ಧನ ನೀಡಬೇಕು. ಹಾಗಾಗಿ ಮುಂದಿನ ವಿಚಾರಣೆ ವೇಳೆ ಪರಿಹಾರ ಧನದ ಪರಿಷ್ಕೃತ ಮೊತ್ತವನ್ನು ತಿಳಿಸಿ’ ಎಂದು ಸೂಚಿಸಿದೆ.
ಇದೇ ವೇಳೆ ಮೀರತ್ ಆಸ್ಪತ್ರೆಯಲ್ಲಿ ಮೃತಪಟ್ಟ 20 ರೋಗಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪೀಠವು, ‘ಕೋವಿಡ್ 19 ಶಂಕಿತ ರೋಗಿಗಳ ಸಾವನ್ನು ಕೋವಿಡ್ ಸಾವು ಎಂದೇ ಪರಿಗಣಿಸಬೇಕು. ಎಲ್ಲಾ ಆಸ್ಪತ್ರೆಗಳು ಈ ಆದೇಶವನ್ನು ಪಾಲಿಸಬೇಕು’ ಎಂದು ನ್ಯಾಯಾಲವು ಹೇಳಿದೆ.
ಈ ಸಾವಿನ ಬಗ್ಗೆ ಸ್ಪಷ್ಟ ವರದಿಯನ್ನು ಸಲ್ಲಿಸುವಂತೆ ಮೀರತ್ನ ವೈದ್ಯಕೀಯ ಕಾಲೇಜಿಗೆ ನ್ಯಾಯಾಲಯವು ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.