ADVERTISEMENT

ಸರ್ವಾಧಿಕಾರಿ ಧೋರಣೆ ನಿಚ್ಚಳವಾಗಿದೆ: ಸೋನಿಯಾ ಗಾಂಧಿ

ಪಿಟಿಐ
Published 14 ಸೆಪ್ಟೆಂಬರ್ 2022, 16:17 IST
Last Updated 14 ಸೆಪ್ಟೆಂಬರ್ 2022, 16:17 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಕರ್ತವ್ಯನಿಷ್ಠ ಪೌರರು ವಿಧೇಯರಾಗಿ ಇರಬೇಕು ಎಂದು ಬಯಸಲಾಗುತ್ತಿದೆ. ಅವರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಈ ಎಲ್ಲ ಕ್ರಮಗಳು ಸರ್ವಾಧಿಕಾರಿ ಧೋರಣೆ ನಿಚ್ಚಳವಾಗುತ್ತಿರುವುದಕ್ಕೆ ಪುಷ್ಟಿನೀಡುವಂತಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿಂದೂಸ್ತಾನ್‌ ಟೈಮ್ಸ್‌ಗೆ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತವನ್ನು ಒಗ್ಗೂಡಿಸಿ ಯಾತ್ರೆ ನಡೆಯುತ್ತಿರುವ ವೇಳೆಯಲ್ಲಿ ಸೋನಿಯಾ ಗಾಂಧಿ ಅವರ ಈ ಲೇಖನ ಪ್ರಾಮುಖ್ಯ ಪಡೆದಿದೆ.

ಸಮಾಜದ ದುರ್ಬಲ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು ಹೀಗೆ ಒಟ್ಟು ನಾಗರಿಕ ಸಮಾಜದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದನ್ನು ಕೆಲವು ಮಾಧ್ಯಮಗಳು ಬೆಂಬಲಿಸಿವೆ. ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಎಲ್ಲದರ ವಿರುದ್ಧ ಜನರು ಬೀದಿಗಿಳಿಯುವಂತಾಗಿದೆ ಎಂದರು.

ADVERTISEMENT

‘ಈ ಎಲ್ಲ ಅಪಾಯಕಾರಿ ಕ್ರಮಗಳು ದೇಶದ ಒಟ್ಟು ರಚನೆಯನ್ನು ದುರ್ಬಲಗೊಳಿಸಿದೆ. ಇದು ದೇಶದ ಒಳಗೆ ಹಾಗೂ ಹೊರಗೆ ಶತ್ರುಗಳನ್ನು ಹೆಚ್ಚಿಸಿದೆ’ ಎಂದರು.

ಸದ್ಯ ಕೆಲವೇ ಕೆಲವರ ಕೈಯಲ್ಲಿರುವ ದೇಶದ ಅಧಿಕಾರ ವ್ಯವಸ್ಥೆಯ ವಿರುದ್ಧ ಪ್ರಜಾಪ್ರಭುತ್ವವು ಜಯ ಸಾಧಿಸಬೇಕು ಎಂದಾದರೆ, ಜನರು ಒಗ್ಗೂಡಬೇಕು ಮತ್ತು ಈ ಪ್ರಬಲ ಶಕ್ತಿಗಳು ಅಧಿಕಾರ ಹಿಡಿಯುವುದನ್ನು ತಡೆಯಬೇಕು ಎಂದರು.

ಆರ್ಥಿಕ ಅಸಮಾನತೆ, ಸಾಮಾಜಿಕ ಸಾಮರಸ್ಯವನ್ನು ಮತ್ತೆ ಪಡೆಯುವುದು ಮತ್ತು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಸ್ವಾತಂತ್ರ್ಯ ನೀಡುವ ಸವಾಲು ನಮ್ಮ ಮುಂದಿದೆ. ದೇಶದ ಈಗಿನ ಹದಗೆಟ್ಟ ಸ್ಥಿತಿಯನ್ನು ಸರಿದಾರಿಗೆ ತರಲು ಮುಂದಿನ 25 ವರ್ಷಗಳು ಬೇಕಾಗಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.