ADVERTISEMENT

ಈರೇಗೌಡಗೆ #MeToo ಬಿಸಿ: ಧರ್ಮಶಾಲಾ ಚಿತ್ರೋತ್ಸವದಿಂದ ‘ಬಳೆಕೆಂಪ’ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 14:38 IST
Last Updated 23 ಅಕ್ಟೋಬರ್ 2018, 14:38 IST
ಈರೇಗೌಡ
ಈರೇಗೌಡ   

ಬೆಂಗಳೂರು: ‘ಬಳೆಕೆಂಪ’ ಚಿತ್ರದ ನಿರ್ದೇಶಕ ಈರೇಗೌಡನ ವಿರುದ್ಧ ಅನಾಮಿಕ ಯುವತಿ ಮಾಡಿದ #MeToo ಆರೋಪದ ಹಿನ್ನೆಲೆಯಲ್ಲಿ ಧರ್ಮಶಾಲಾ ಅಂತರರಾಷ್ಟ್ರೀಯ ಚಿತ್ರೋತ್ಸವ ಸಮಿತಿಯು ಚಿತ್ರವನ್ನು ಪ್ರದರ್ಶಿಸದಿರಲು ನಿರ್ಧರಿಸಿದೆ.ಈರೇಗೌಡರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಯುವತಿಯೊಬ್ಬರು ಮಂಗಳವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು ಧರ್ಮಶಾಲಾ ಚಿತ್ರೋತ್ಸವ ಸಮಿತಿ ಗಂಭೀರವಾಗಿ ಪರಿಗಣಿಸಿದೆ.

ಬಳೆಕೆಂಪ ಸಿನಿಮಾದ ದೃಶ್ಯ

ಬಳೆ ಮಾರುವ ದಂಪತಿಗಳ ಸಂಕಷ್ಟ ಚಿತ್ರಿಸುವ ‘ಬಳೆಕೆಂಪ’ ಚಿತ್ರಕ್ಕೆ ವಿಮರ್ಶಕರಿಂದ ಶ್ಲಾಘನೆ ವ್ಯಕ್ತವಾಗಿತ್ತು. ಧರ್ಮಶಾಲಾ ಚಿತ್ರೋತ್ಸವದ ಜೊತೆಗೆ ‘ಜಿಯೋ ಮಾಮಿ ಮುಂಬೈ ಫಿಲಂ ಫೆಸ್ಟಿವಲ್‌’ನ ಇಂಡಿಯಾ ಗೋಲ್ಡ್‌ ವಿಭಾಗಕ್ಕೆ ಆಯ್ಕೆಯಾಗಿತ್ತು. ಜೆಂಡರ್‌ ಇಕ್ವಾಲಿಟಿಗೆ (ಲಿಂಗ ಸಮಾನತೆ) ಸಂಬಂಧಿಸಿದ ವಿಭಾಗದಲ್ಲಿಯೂ ಪ್ರದರ್ಶನಕ್ಕೆ ಪರಿಗಣಿಸಲ್ಪಟ್ಟಿತ್ತು. ಈವರೆಗೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ 12 ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

‘ಧರ್ಮಶಾಲಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಸುರಕ್ಷಿತ ಭಾವನೆ ಮೂಡಿಸಲು ಬದ್ಧವಾಗಿದೆ. ದೌರ್ಜನ್ಯ, ಹಿಂಸೆ ಮತ್ತು ಹಲ್ಲೆಯಂಥ ಕೃತ್ಯಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ‘ಬಳೆಕೆಂಪ’ ಚಿತ್ರದ ನಿರ್ದೇಶಕ ಈರೇಗೌಡ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿವೆ.

ADVERTISEMENT

‘ಬಳೆಕೆಂಪ’ ಧರ್ಮಶಾಲಾ ಚಿತ್ರೋತ್ಸವದ ಸಮಾರೋಪ ಚಿತ್ರವಾಗಿ ಪ್ರದರ್ಶನಗೊಳ್ಳಬೇಕಿತ್ತು. ಆ ಚಿತ್ರವನ್ನು ಪ್ರದರ್ಶಿಸದಿರಲು ಚಿತ್ರೋತ್ಸವ ಸಮಿತಿ ನಿರ್ಧರಿಸಿದೆ. ಮಾತ್ರವಲ್ಲ ಈರೇಗೌಡ ಅವರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಬಾರದು ಎಂದು ಸೂಚಿಸಲಾಗಿದೆ’ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.