ADVERTISEMENT

ಉತ್ತರ ಪ್ರದೇಶ: ಅಜಂಗಡದ ಜನರೊಂದಿಗೆ ಚರ್ಚಿಸಿ ಚುನಾವಣೆಯಲ್ಲಿ ಸ್ಪರ್ಧೆ- ಅಖಿಲೇಶ್

ಬಿಜೆಪಿ ಸೇರಿದ ಅಪರ್ಣಾ ಯಾದವ್ ಅವರಿಗೆ ಅಭಿನಂದನೆ ಸಲ್ಲಿಸಿದ ಅಖಿಲೇಶ್ ಯಾದವ್

ಐಎಎನ್ಎಸ್
Published 19 ಜನವರಿ 2022, 10:21 IST
Last Updated 19 ಜನವರಿ 2022, 10:21 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮಾಜಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬುಧವಾರ ಬಿಜೆಪಿ ಸೇರಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಅಪರ್ಣಾ ಯಾದವ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಪರ್ಣಾ ಅವರು ಕೇಸರಿ ಪಕ್ಷಕ್ಕೆ ಸೇರಿರುವ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ 'ನಾನು ಅವರಿಗೆ ಶುಭ ಹಾರೈಸುತ್ತೇನೆ. ಮುಲಾಯಂ ಸಿಂಗ್ ಯಾದವ್ ಅವರು ಆಕೆಯ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅವರು ತಮಗಿಷ್ಟ ಬಂದಂತೆ ಮಾಡಿದ್ದಾರೆ' ಎಂದು ಹೇಳಿದರು.

ಎಸ್‌ಪಿ ಟಿಕೆಟ್ ನಿರಾಕರಿಸಿದ್ದರಿಂದ ಅಪರ್ಣಾ ಬಿಜೆಪಿ ಸೇರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, 'ನಾವು ಇನ್ನೂ ಎಲ್ಲಾ ಟಿಕೆಟ್‌ಗಳನ್ನು ನೀಡಿಲ್ಲ, ಟಿಕೆಟ್‌ ನೀಡುವ ನಿರ್ಧಾರವು ನಮ್ಮ ಆಂತರಿಕ ಸಮೀಕ್ಷೆಯನ್ನು ಅವಲಂಬಿಸಿರುತ್ತದೆ' ಎಂದು ಹೇಳಿದರು.

ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, 'ನಾನು ಅಜಂಗಡದಲ್ಲಿನ ಜನರ ಅನುಮತಿಯನ್ನು ಪಡೆದುಕೊಳ್ಳುತ್ತೇನೆ. ನಂತರ ಅಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ' ಎಂದು ಹೇಳಿದರು

ಮೂಲಗಳ ಪ್ರಕಾರ, ಅಖಿಲೇಶ್ ಅವರು ತಮ್ಮ ಸಂಸದೀಯ ಕ್ಷೇತ್ರವೂ ಆಗಿರುವ ಅಜಂಗಡದ ಗೋಪಾಲ್‌ಪುರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಈಮಧ್ಯೆ, ಅಖಿಲೇಶ್ ಅವರ ಪಕ್ಷ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ಈ ಹಿಂದೆ ನೀಡುತ್ತಿದ್ದ ಸಮಾಜವಾದಿ ಪಿಂಚಣಿಯನ್ನು ವರ್ಷಕ್ಕೆ ₹ 6,000 ದಿಂದ ₹ 18,000 ಕ್ಕೆ ಅಂದರೆ ಮೂರು ಪಟ್ಟು ಹೆಚ್ಚಿಸುವುದಾಗಿ ಬುಧವಾರ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.