ಹೈದರಾಬಾದ್: ಜಾತಿನಿಂದನೆಗೊಳಗಾಗಿ 2016 ಜ.17ರಂದು ಹೈದರಾಬಾದ್ ಕೇಂದ್ರ ವಿ.ವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪಿಎಚ್.ಡಿ ವಿದ್ಯಾರ್ಥಿ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲಾ 'ಭಾರತ್ ಜೋಡೊ ಯಾತ್ರೆ'ಯಲ್ಲಿ ಪಾಲ್ಗೊಂಡರು. ಮಂಗಳವಾರ ಬೆಳಿಗ್ಗೆ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದರು.
ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ, ರೋಹಿತ್ ವೇಮುಲಾ ಅವರು ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯ ವಿರುದ್ಧದ ಹೋರಾಟದ ಸಂಕೇತವಾಗಿದ್ದಾರೆ ಎಂದರು.
'ಭಾರತ್ ಜೋಡೊ ಯಾತ್ರೆಯ ಐಕಮತ್ಯಕ್ಕೆ ಓಗೊಟ್ಟು ರಾಹುಲ್ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕುತ್ತಿದ್ದೇನೆ. ಬಿಜೆಪಿ-ಆರೆಸ್ಸೆಸ್ನಿಂದ ಸಂವಿಧಾನವನ್ನು ಕಾಪಾಡುವಂತೆ ಕಾಂಗ್ರೆಸ್ಗೆ ಮನವಿ ಮಾಡಿದ್ದೇನೆ. ರೋಹಿತ್ಗೆ ನ್ಯಾಯ ದೊರಕಿಸಿಕೊಡುವಂತೆ, ರೋಹಿತ್ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಂತೆ, ದಲಿತರ ಪ್ರಾತಿನಿಧ್ಯ ಹೆಚ್ಚಿಸುವಂತೆ, ಎಲ್ಲರಿಗೂ ಶಿಕ್ಷಣ ನೀಡುವಂತೆ ಮನವಿ ಮಾಡಿದ್ದೇನೆ ಎಂದು ರಾಧಿಕಾ ವೇಮುಲಾ ಅವರು ರಾಹುಲ್ ಭೇಟಿಯ ಬಳಿಕ ಟ್ವೀಟ್ ಮಾಡಿದ್ದಾರೆ.
'ನಿರ್ಧಿಷ್ಠ ಗುರಿಯೆಡೆಗಿನ ನಮ್ಮ ಪ್ರಯಾಣಕ್ಕೆ ರೋಹಿತ್ ಅವರ ತಾಯಿಯ ಭೇಟಿ ಹೊಸ ಸ್ಥೈರ್ಯವನ್ನು ತುಂಬಿದೆ. ಮನಸ್ಸಿಗೆ ಶಾಂತಿ ಸಿಕ್ಕಿದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಪಕ್ಷದ ಕಾರ್ಯಕರ್ತರು ರಾಧಿಕಾ ವೇಮುಲಾ ಅವರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
2016ರ ಜನವರಿ 17ರಂದು 26 ವರ್ಷದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರು ಆತ್ಮಹತ್ಯೆ ಮಾಡಿಕೊಂಡಾಗ ರಾಷ್ಟ್ರ ಮಟ್ಟದಲ್ಲಿ ಜಾತಿನಿಂದನೆ ವಿರುದ್ಧ ಹೋರಾಟ ನಡೆದಿತ್ತು. ಈ ಸಂದರ್ಭ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಹೋರಾಟದಲ್ಲಿ ಜೊತೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.