ಕಥುವಾ (ಜಮ್ಮು ಕಾಶ್ಮೀರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಜಮ್ಮು ಕಾಶ್ಮೀರಕ್ಕೆ ಪ್ರವೇಶಿಸಿದ್ದು, ಹಲವು ಗಣ್ಯರು ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಸಿಯಾಚಿನ್ ಕದನದ ಹೀರೋ, ಪರಮವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ಬನಾ ಸಿಂಗ್ ಅವರು ಶುಕ್ರವಾರ ಕಥುವಾ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು.
ಬನಾ ಸಿಂಗ್ ಅವರ ಕೈ ಹಿಡಿದು ನಡೆಯುತ್ತಿರುವ ಫೋಟೋವನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಭೇಟಿ ಪ್ರೇರಣಾದಾಯಕ ಎಂದು ಬರೆದುಕೊಂಡಿದ್ದಾರೆ.
‘ಭಾರತ ಹಾಗೂ ಅದರ ಆದರ್ಶಗಳ ರಕ್ಷಣೆಯ ಬಗ್ಗೆ ಬಂದಾಗೆಲ್ಲಾ, ಧೀರರಾದ ಬನಾ ಸಿಂಗ್ ಅವರ ಹೆಸರು ಕೇಳಿ ಬರುತ್ತದೆ. ಸಿಯಾಚಿನ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪರಮವೀರ ಚಕ್ರ ಕ್ಯಾಪ್ಟನ್ ಬನಾ ಸಿಂಗ್ ಅವರು ನನಗೆ ಹಾಗೂ ಎಲ್ಲಾ ದೇಶಪ್ರೇಮಿಗಳಿಗೂ ಮಾದರಿ‘ ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಕ್ಯಾಪ್ಟನ್ ಬನಾ ಸಿಂಗ್ ಅವರು ‘ಅಪರೇಷನ್ ರಾಜೀವ್‘ ಕದನದಲ್ಲಿ ತೋರಿದ ಸಾಹಸಕ್ಕೆ ಸೇನೆ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಪರಮ ವೀರ ಚಕ್ರ‘ವನ್ನು ಪಡೆದುಕೊಂಡಿದ್ದಾರೆ.
ಸಿಯಾಚಿನ್ ತುದಿಯಲ್ಲಿ ಪಾಕಿಸ್ತಾನದ ವಶದಲ್ಲಿ ಪ್ರದೇಶವನ್ನು ವಶಪಡಿಸಿಕೊಂಡು, ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಖ್ಯಾತಿ ಇವರದು. ಬಳಿಕ ಆ ಪ್ರದೇಶಕ್ಕೆ ‘ಬನಾ ಪೋಸ್ಟ್‘ ಎಂದು ನಾಮಕರಣ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.