ADVERTISEMENT

ಜಾಮಾ ಮಸೀದಿಗೆ ಭೇಟಿ ನೀಡಿದ ಆಜಾದ್‌

ಪಿಟಿಐ
Published 17 ಜನವರಿ 2020, 19:30 IST
Last Updated 17 ಜನವರಿ 2020, 19:30 IST
ಚಂದ್ರಶೇಖರ ಆಜಾದ್‌
ಚಂದ್ರಶೇಖರ ಆಜಾದ್‌   

ನವದೆಹಲಿ: ತಿಹಾರ್‌ ಜೈಲಿನಿಂದ ಬಿಡುಗಡೆಗೊಂಡಿರುವ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಶುಕ್ರವಾರ ಇಲ್ಲಿನ ಜಾಮಾ ಮಸೀದಿಗೆ ಭೇಟಿ ನೀಡಿದರು.

ಸುಮಾರು 40 ನಿಮಿಷಗಳ ಕಾಲ ಮಸೀದಿಯಲ್ಲಿ ಕಳೆದ ಅವರು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಬೆಂಬಲಿಗರು ಮತ್ತು ಸ್ಥಳೀಯರು ಅವರನ್ನು ಸುತ್ತುವರಿದಿದ್ದರು. ಪೌರತ್ವ (ತಿದ್ದುಪಡಿ) ಕಾಯಿದೆಯನ್ನು(ಸಿಎಎ) ‘ಕರಾಳ ಕಾಯಿದೆ’ ಎಂದು ಬಣ್ಣಿಸಿದ ಆಜಾದ್‌, ಅದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಮಸೀದಿಗೆ ತೆರಳುವುದಕ್ಕೂ ಮುನ್ನ ಅವರು ಗೋಲ್‌ ಮಾರ್ಕೆಟ್‌ ಬಳಿಯ ಭಗವಾನ್‌ ವಾಲ್ಮೀಕಿ ಮಂದಿರ ಹಾಗೂ ಗುರುದ್ವಾರ ಬಾಂಗ್ಲಾ ಸಾಹಿಬ್‌ಗೂ ಭೇಟಿ ನೀಡಿದ್ದರು.

ADVERTISEMENT

ಇತ್ತೀಚೆಗೆ ಸಿಎಎ ವಿರುದ್ಧ ಜಾಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಜನರನ್ನು ಪ್ರಚೋದಿಸಿದ ಆರೋಪದಲ್ಲಿ ಆಜಾದ್‌ ಅವರನ್ನು ಪೊಲೀಸರು ಬಂಧಿಸಿದ್ದರು. ದೆಹಲಿ ನ್ಯಾಯಾಲಯವು ಬುಧವಾರ ಅವರಿಗೆ ಜಾಮೀನು ಮಂಜೂರು ಮಾಡಿ, ನಾಲ್ಕು ವಾರಗಳ ಕಾಲ ದೆಹಲಿಗೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಿತ್ತು.

ಚುನಾವಣೆವರೆಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಬಾರದು ಎಂದೂ ಅವರಿಗೆ ಆದೇಶಿಸಿತ್ತು.

ಸಹರಾನ್‌ಪುರಕ್ಕೆ ತೆರಳುವ ಮೊದಲು ಆಜಾದ್‌ ಅವರು ಜಾಮಾ ಮಸೀದಿ ಸೇರಿದಂತೆ ಎಲ್ಲಿಗೆ ತೆರಳಲು ಬಯಸಿದರೂ ಅವರಿಗೆ ಪೊಲೀಸರು ಬೆಂಗಾವಲು ನೀಡಬೇಕೆಂದೂ ನ್ಯಾಯಾಲಯ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.