ತಿರುವನಂತಪುರ:ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಿಂದ ಬಿಷಪ್ ಫ್ರಾಂಕೊ ಮುಳಯ್ಕಲ್ ಅವರನ್ನು ಕೇರಳದ ಕೋಟ್ಟಯಂನ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
2014-16ರ ಅವಧಿಯಲ್ಲಿ ಬಿಷಪ್ ತನ್ನ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪಿಸಿ ದೂರು ನೀಡಿದ್ದರು.
ಕೋಟ್ಟಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮುಳಯ್ಕಲ್ (57) ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತು. ನ್ಯಾಯಾಲಯದ ಕೊಠಡಿಯಲ್ಲಿ ಹಾಜರಿದ್ದ ಮುಳಯ್ಕಲ್ ಭಾವುಕರಾಗಿ ತನ್ನ ಪರ ವಕೀಲರನ್ನು ಅಪ್ಪಿಕೊಂಡರು. ನ್ಯಾಯಾಲಯದ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಿಸಿದಮುಳಯ್ಕಲ್ ಅವರ ಬೆಂಬಲಿಗರು, ಇದೊಂದು ಹುಸಿ ಪ್ರಕರಣವಾಗಿದ್ದು, ಸಾಕ್ಷ್ಯಾಧಾರಗಳಿಲ್ಲ ಎಂದು ದೂರಿದರು.
‘ನ್ಯಾಯಕ್ಕಾಗಿ ಸಾಯುವವರೆಗೂ ಹೋರಾಡುತ್ತೇವೆ’:‘ನ್ಯಾಯಾಲಯದ ಈ ತೀರ್ಪು ನಂಬಲಾಗುತ್ತಿಲ್ಲ. ನಮ್ಮ ಸಹವರ್ತಿ ಸನ್ಯಾಸಿನಿಗೆ ಸಿಗಬೇಕಾದ ನ್ಯಾಯಕ್ಕಾಗಿ ನಾವು ಸಾಯುವವರೆಗೂ ಹೋರಾಟ ಕೈಬಿಡುವುದಿಲ್ಲ’ ಎಂದು ಕೇರಳದ ಕ್ರೈಸ್ತ ಸನ್ಯಾಸಿನಿ ಅನುಪಮಾ ಹೇಳಿದ್ದಾರೆ. ಅವರಿಗೆ ಕೇರಳದ ಸನ್ಯಾಸಿನಿಯರು ಬೆಂಬಲ ಸೂಚಿಸಿದ್ದಾರೆ.
ಸಂತ್ರಸ್ತೆಗೆ ಎನ್ಸಿಡಬ್ಲ್ಯು ಸಲಹೆ:ಈ ಆದೇಶದ ವಿರುದ್ಧ ಸಂತ್ರಸ್ತ ಮಹಿಳೆಯು ಹೈಕೋರ್ಟ್ ಮೊರೆ ಹೋಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.