ADVERTISEMENT

ರಾಮನ ಅಸ್ತಿತ್ವ ಪ್ರಶ್ನಿಸಿದ ರಾಹುಲ್ ವಿರುದ್ಧ ಬಿಜೆಪಿ ವಾಗ್ದಾಳಿ

ಪಿಟಿಐ
Published 11 ಏಪ್ರಿಲ್ 2022, 12:31 IST
Last Updated 11 ಏಪ್ರಿಲ್ 2022, 12:31 IST
   

ನವದೆಹಲಿ: ಶ್ರೀರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದೆ. ಅಲ್ಲದೆ ರಾಜಕೀಯಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಹುಲ್ ಗಾಂಧಿ ಅವರ ಹೇಳಿಕೆಗಳಿಂದಾಗಿ ದೇಶದಾದ್ಯಂತ ಶ್ರೀರಾಮ ನವಮಿಯ ಮೆರವಣಿಗೆಗಳ ಮೇಲೆ ಪರಿಣಾಮ ಬೀರಿದೆ ಎಂದು ಬಿಜೆಪಿ ದೂರಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, 'ರಾಹುಲ್ ಗಾಂಧಿ ಅವರು ಚುನಾವಣೆ ಸಂದರ್ಭದ ಹಿಂದೂ ಆಗಿದ್ದಾರೆ' ಎಂದು ವ್ಯಂಗ್ಯವಾಡಿದರು.

ಇತ್ತೀಚೆಗೆ ದಲಿತ ಯುವಕರ ಜೊತೆಗಿನ ಸಂವಾದದ ವೇಳೆ ರಾಹುಲ್ ಪುನರ್ ಜನ್ಮದ ಬಗ್ಗೆ ಪ್ರಶ್ನೆಯೆತ್ತಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಬಿತ್‌ ಪಾತ್ರ ಅವರು, 'ರಾಮನ ಇರುವಿಕೆಯ ಪ್ರಶ್ನೆಗಳನ್ನು ಎತ್ತುವ ಮೂಲಕ ಕೆಲವು ನಾಯಕರು ಜನರನ್ನು ಕೆರಳಿಸುತ್ತಿದ್ದಾರೆ. ಇಂಥ ಕೆಲಸಗಳು ನಡೆಯಲೇಬಾರದು. ರಾಮನ ಮೇಲಿನ ಭಾರತೀಯರ ನಂಬಿಕೆಯನ್ನು ಅರಗಿಸಿಕೊಳ್ಳಲು ರಾಹುಲ್ ಗಾಂಧಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬಂತೆ ಕಾಣುತ್ತಿದೆ. ಇದು ಕಾಂಗ್ರೆಸ್ಸಿನ ಚಾರಿತ್ರ್ಯವನ್ನು ತೋರಿಸುತ್ತದೆ' ಎಂದು ಛೇಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.