ಲಖನೌ: ನಾಲ್ವರು ಮುಸ್ಲಿಮರು ರೈಲಿನಲ್ಲಿ ನಮಾಜ್ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ದೂರು ನೀಡಲಾಗಿದೆ.
ಖಡ್ಡಾ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ನಮಾಜ್ ಮಾಡುತ್ತಿದ್ದ ವಿಡಿಯೊವನ್ನು ಉತ್ತರ ಪ್ರದೇಶದ ಮಾಜಿ ಶಾಸಕ ದೀಪಲಾಲ್ ಭಾರ್ತಿ ಚಿತ್ರೀಕರಿಸಿದ್ದಾರೆ ಎಂದು ‘ಇಂಡಿಯಾ ಟುಡೆ’ವರದಿ ಮಾಡಿದೆ.
ಅಕ್ಟೋಬರ್ 20ರಂದು ಸತ್ಯಾಗ್ರಹ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಸಂದರ್ಭ ನಾಲ್ವರು ರೈಲಿನಲ್ಲಿ ಜನರು ಓಡಾಡುವ ಮಾರ್ಗ ಬಂದ್ ಮಾಡಿ ನಮಾಜ್ ಮಾಡುತ್ತಿದ್ದರು ಎಂದು ಮಾಜಿ ಶಾಸಕರು ತಿಳಿಸಿದ್ದಾರೆ.
‘ಸ್ಲೀಪರ್ ಕೋಚ್ನಲ್ಲಿ ಅವರು ನಮಾಜ್ ಮಾಡುತ್ತಿದ್ದ ವಿಡಿಯೊವನ್ನು ನಾನು ಚಿತ್ರೀಕರಿಸಿದೆ. ಅವರ ವರ್ತನೆಯಿಂದಾಗಿ ಸಹ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು. ಪ್ರಯಾಣಿಕರು ರೈಲಿನ ಒಳಬರಲು ಅಥವಾ ಹೊರ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಅವರು ಹೇಗೆ ನಮಾಜ್ ಮಾಡುತ್ತಾರೆ? ಅದು ತಪ್ಪು’ಎಂದು ಅವರು ಹೇಳಿದ್ದಾರೆ.
ಬೋಗಿಯ ಎರಡೂ ಬದಿಗಳಲ್ಲಿ ಇಬ್ಬಿಬ್ಬರು ನಮಾಜ್ ಮಾಡುತ್ತಿದ್ದರಿಂದ ಬೋಗಿ ಪ್ರವೇಶಿಸಲು ಮತ್ತು ಹೊರಹೋಗಲು ತಡೆಯಾಗಿತ್ತು ಎಂದು ಮಾಜಿ ಶಾಸಕರು ಹೇಳಿದ್ದಾರೆ. ಈ ಸಂಬಂಧ ದೀಪಲಾಲ್ ಭಾರ್ತಿ ಅವರು ಭಾರತೀಯ ರೈಲ್ವೇ ಅಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡಿದ ಮೊದಲ ಘಟನೆ ಇದಲ್ಲ. ಈ ಹಿಂದೆ, ಲಖನೌದ ಲುಲು ಮಾಲ್ನಲ್ಲಿ ಜನರ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ವಿವಾದ ಭುಗಿಲೆದ್ದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.