ADVERTISEMENT

ಉತ್ತರ ಪ್ರದೇಶಕ್ಕೆ ಸಂತೋಷ್ ಭೇಟಿ: ಪಕ್ಷದ ಕಾರ್ಯಚಟುವಟಿಕೆ ಪರಿಶೀಲನೆ

ಪಿಟಿಐ
Published 20 ಜೂನ್ 2021, 10:55 IST
Last Updated 20 ಜೂನ್ 2021, 10:55 IST
ಬಿ ಎಲ್‌ ಸಂತೋಷ್‌
ಬಿ ಎಲ್‌ ಸಂತೋಷ್‌   

ಲಖನೌ (ಪಿಟಿಐ): ಉತ್ತರ ಪ್ರದೇಶದಲ್ಲಿ ಪಕ್ಷದ ಕಾರ್ಯಚಟುವಟಿಕೆ ಪ್ರಗತಿ ಪರಿಶೀಲಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಮತ್ತು ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಎರಡು ದಿನಗಳ ಭೇಟಿಗಾಗಿ ಸೋಮವಾರ ಇಲ್ಲಿಗೆ ಆಗಮಿಸಲಿದ್ದಾರೆ.

ಇದು, ಈ ತಿಂಗಳಲ್ಲಿ ರಾಜ್ಯಕ್ಕೆ ಈ ಮುಖಂಡರ ಎರಡನೇ ಭೇಟಿಯಾಗಲಿದೆ. ರಾಜ್ಯದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವುದು ಭೇಟಿಯ ಉದ್ದೇಶ ಎನ್ನಲಾಗಿದೆ. ಈ ಹಿಂದಿನ ಭೇಟಿಯಲ್ಲಿ ರಾಜ್ಯ ಉಸ್ತುವಾರಿ ಸಿಂಗ್‌ ಅವರು, ‘ರಾಜ್ಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬದಲಾವಣೆ ಸಾಧ್ಯತೆ ಇಲ್ಲ’ ಎಂದು ತಿಳಿಸಿದ್ದರು.

ಸಿಂಗ್ ಅವರ ಆಪ್ತರ ಪ್ರಕಾರ, ಉಭಯ ಮುಖಂಡರು ಎರಡು ದಿನದ ಭೇಟಿಯಲ್ಲಿ ‘ಸೇವಾ ಹೀ ಸಂಘಟನ್‌’ ಸೇರಿದಂತೆ ರಾಜ್ಯದಲ್ಲಿ ಪಕ್ಷದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸುವರು. ಇನ್ನೊಬ್ಬ ಮುಖಂಡರ ಪ್ರಕಾರ, ಈ ವರ್ಷದ ನವೆಂಬರ್‌ ವೇಳೆಗೆ ಪಕ್ಷ ಪೂರ್ಣಪ್ರಮಾಣದಲ್ಲಿ ಚುನಾವಣೆ ಕಾರ್ಯಚಟುವಟಿಕೆ ಆರಂಭಿಸಲಿದೆ.

ADVERTISEMENT

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಯ ನಿರ್ವಹಣೆ ಕುರಿತಂತೆ ಬಿಜೆಪಿಯ ಕೆಲವು ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಪ್ರಮುಖ ವಿರೋಧಪಕ್ಷಗಳಾದ ಎಸ್‌.ಪಿ., ಬಿಎಸ್‌ಪಿ., ಮತ್ತು ಕಾಂಗ್ರೆಸ್‌ ಪಕ್ಷಗಳು ಚುನಾವಣೆಯಲ್ಲಿ ನಿರ್ವಹಣೆ ವೈಫಲ್ಯವನ್ನೇ ಪ್ರಮುಖ ವಿಷಯವಾಗಿ ಬಿಂಬಿಸಲು ತೀರ್ಮಾನಿಸಿವೆ.

ವಿಧಾನಪರಿಷತ್ತಿನ ಸದಸ್ಯ,ಮಾಜಿ ಐಎಎಸ್‌ ಅಧಿಕಾರಿ ಎ.ಕೆ.ಶರ್ಮಾ ಅವರನ್ನು ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಈಚೆಗಷ್ಟೇ ನೇಮಿಸಲಾಗಿದ್ದು, ಅದರ ಹಿಂದೆಯೇ ಇಬ್ಬರು ಮುಖಂಡರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಚುನಾವಣೆಗೆ ಮೊದಲೇ ಅವರು ಯೋಗಿ ಆದಿತ್ಯನಾಥ್‌ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ಇಲ್ಲಿ ದಟ್ಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.