ADVERTISEMENT

ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಇದು ಕೊಲೆ ಎಂದ ಜನ

ಏಜೆನ್ಸೀಸ್
Published 13 ಜುಲೈ 2020, 5:16 IST
Last Updated 13 ಜುಲೈ 2020, 5:16 IST
ದೇಬೇಂದ್ರನಾಥ್‌ ರಾಯ್‌ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಸೇರಿರುವ ಜನ (ಟ್ವಿಟರ್‌ ಚಿತ್ರ)
ದೇಬೇಂದ್ರನಾಥ್‌ ರಾಯ್‌ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಸೇರಿರುವ ಜನ (ಟ್ವಿಟರ್‌ ಚಿತ್ರ)   

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರನಾಥ ರಾಯ್‌ ಅವರು ಹುಟ್ಟೂರಿನಲ್ಲಿರುವ ಮಾರುಕಟ್ಟೆಯ ಕಟ್ಟಡವೊಂದರ ಎದುರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಹೆಮ್ಟಾಬಾದ್‌ ಮೀಸಲು ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ದೇಬೇಂದ್ರನಾಥ್‌ ರಾಯ್‌ ಅವರು, ಉತ್ತರ ದಿನಜ್‌ಪುರ ಜಿಲ್ಲೆಯ ಬಿಂದಲ್‌‌ ಸಾವಿಗೀಡಾಗಿದ್ದಾರೆ. ರಸ್ತೆ ಪಕ್ಕದ ಕಟ್ಟಡದ ಚಾವಣಿಗೆ ನೇಣುಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ದೇಬೇಂದ್ರನಾಥ್‌ ಅವರನ್ನು ಯಾರೋ ಮೊದಲು ಕೊಂದು ನಂತರ ನೇಣಿಗೆ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಕೆಲ ವ್ಯಕ್ತಿಗಳು ಮನೆ ಬಳಿ ಬಂದು ಕರೆದರು ಎಂದು ಕುಟುಂಬಸ್ಥರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಅಲ್ಲದೆ, ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಮುಂದುವರಿದ ದಾಳಿ ಇದು ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಸಾಮಾಜಿಕ ತಾಣಗಳಲ್ಲೂ ಈ ವಿಚಾರ ಚರ್ಚೆಯಾಗುತ್ತಿದೆ. ಇದು ರಾಜಕೀಯ ಪ್ರೇರಿತ ಕೊಲೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

‘ದೇಬೇಂದ್ರನಾಥ ರಾಯ್‌ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಅಪರಾಧವೇನೆಂದರೆ, ಬಿಜೆಪಿಗೆ ಸೇರಿದ್ದು,’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮಾರ್ಮಿಕವಾಗಿ ಹೇಳಿದೆ.

ಮೊದಲಿಗೆ ಸಿಪಿಐಎಂ ಪಕ್ಷದಿಂದ ಹೆಮ್ಟಾಬಾದ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದ ದೇಬೇಂದ್ರನಾಥ್‌ ರಾಯ್‌ ಅವರು ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಂತರ ಬಿಜೆಪಿ ಟಿಕೆಟ್‌ ಮೂಲಕ ಸ್ಪರ್ಧಿಸಿ ಮರು ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.