ಕೊಚ್ಚಿ: ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರವು ಪೊಲೀಸ್ ಕಾಯ್ದೆಗೆ ತಂದಿರುವ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ, ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಆರ್ಎಸ್ಪಿ ನಾಯಕ ಶಿಬು ಬೇಬಿ ಜಾನ್ ಹೈಕೋರ್ಟ್ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
‘2011 ಕೇರಳ ಪೊಲೀಸ್ ಕಾಯ್ದೆಯಲ್ಲಿ ಸೇರ್ಪಡಿಸಿರುವ ನೂತನ ಸೆಕ್ಷನ್ 118–ಎ ಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಈ ತಿದ್ದುಪಡಿಯನ್ನು ರದ್ದುಗೊಳಿಸಲು ಆದೇಶಿಸಬೇಕು’ ಎಂದು ಅರ್ಜಿಯಲ್ಲಿ ಸುರೇಂದ್ರನ್ ಮನವಿ ಸಲ್ಲಿಸಿದ್ದಾರೆ.
‘ತಿದ್ದುಪಡಿಯು ಸಂವಿಧಾನದಲ್ಲಿ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ತಿದ್ದುಪಡಿ ಅನ್ವಯ ಸಕಾರಾತ್ಮಕ ಸಲಹೆ ಹಾಗೂ ಟೀಕೆಯೂ ಅಪರಾಧಕ್ಕೆ ಸಮಾನವೆಂಬಂತೆ ಗುರುತಿಸಲಾಗಿದೆ. ಇದು ಜನರಲ್ಲಿ ಭೀತಿಯನ್ನು ಉಂಟು ಮಾಡಿದ್ದು, ಸಲಹೆಯನ್ನು ನೀಡಲೂ ಅವರು ಹಿಂಜರಿಯುವಂತೆ ಮಾಡಿದೆ’ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.
ಶಿಬು ಬೇಬಿ ಜಾನ್ ಅವರೂ, ತಿದ್ದುಪಡಿಯನ್ನೂ ಅಸಾಂವಿಧಾನಿಕ ಎಂದು ಘೋಷಿಸಲು ಅರ್ಜಿಯಲ್ಲಿ ಮನವಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.