ADVERTISEMENT

ಬಿಹಾರ: ಕೇಂದ್ರದ ಮಾಜಿ ಸಚಿವ, ಎಂಎಲ್‌ಸಿ, ಮೇಯರ್‌ ಬಿಜೆಪಿಯಿಂದ ಅಮಾನತು

ಬಿಹಾರ ವಿಧಾನಸಭಾ ಚುನಾವಣೆ: ಪಕ್ಷ ವಿರೋಧಿ ಚಟುವಟಿಕೆ ನಡೆಸಿವರ ವಿರುದ್ಧ ಬಿಜೆಪಿ ಶಿಸ್ತುಕ್ರಮ

ಪಿಟಿಐ
Published 15 ನವೆಂಬರ್ 2025, 14:01 IST
Last Updated 15 ನವೆಂಬರ್ 2025, 14:01 IST
ರಾಜ್‌ಕುಮಾರ್‌ ಸಿಂಗ್‌
ರಾಜ್‌ಕುಮಾರ್‌ ಸಿಂಗ್‌   

ಪಟ್ನಾ, ಬಿಹಾರ: ಬಿಹಾರದ ಆಡಳಿತಾರೂಢ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರದ ಮಾಜಿ ಸಚಿವ ರಾಜ್‌ಕುಮಾರ್‌ ಸಿಂಗ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣ ನೀಡಿ ಬಿಜೆಪಿಯಿಂದ ಶನಿವಾರ ಅಮಾನತುಗೊಳಿಸಲಾಗಿದೆ.

ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಿಂದ ಸಿಂಗ್‌ ಅವರನ್ನು ಅಮಾನತುಗೊಳಿಸಿದ ಆದೇಶ ಹೊರಡಿಸಲಾಗಿದ್ದು, ಯಾವ ಕಾರಣಕ್ಕಾಗಿ ಪಕ್ಷದಿಂದ ಹೊರಹಾಕಬಾರದು ಎಂದು ಉತ್ತರಿಸುವಂತೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಅಶೋಕ್‌ ಕುಮಾರ್‌ ಅಗರ್‌ವಾಲ್‌, ಅವರ ಪತ್ನಿ, ಕಥಿಹಾರ್‌ನ ಮೇಯರ್‌ ಉಷಾ ಅಗರ್‌ವಾಲ್‌ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ADVERTISEMENT

ಇವರ ಮಗ ಸೌರಭ್‌ ಅವರು ಕಟಿಹಾರ್‌ ವಿಧಾನಸಭಾ ಕ್ಷೇತ್ರದಿಂದ ವಿಕಾಸ್‌ಶೀಲ್‌ ಇನ್ಸಾನ್‌ ಪ‍ಕ್ಷದಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಹಾಲಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ತಾರ್‌ ಕಿಶೋರ್‌ ‍ಪ್ರಸಾದ್‌ ಅವರು ಸ್ಪರ್ಧಿಸಿದ್ದರು. ಪತಿ ಹಾಗೂ ಪತ್ನಿ ಇಬ್ಬರೂ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೇ, ತನ್ನ ಮಗನ ಪರ ಬಹಿರಂಗ ಪ್ರಚಾರ ನಡೆಸಿದ್ದರು.

ಐಎಎಸ್‌ ಅಧಿಕಾರಿಯಾಗಿದ್ದ ಆರ್‌.ಕೆ.ಸಿಂಗ್‌ ಅವರು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತಿಯಾದ ಬಳಿಕ 2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2014 ಹಾಗೂ 2019ರಲ್ಲಿ ಆರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿ, ಕೇಂದ್ರದಲ್ಲಿ ಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. 2024ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು.

ಇತ್ತೀಚಿನ ದಿನಗಳಲ್ಲಿ ಪಕ್ಷದ ಮುಖಂಡರ ವಿರುದ್ಧವೇ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದರು. ಉಪ ಮುಖ್ಯಮಂತ್ರಿ ಸಮರ್ಥ್‌ ಚೌಧರಿ ಅವರು ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಭಾಗಲ್ಪುರದಲ್ಲಿ ವಿದ್ಯುತ್‌ ಸ್ಥಾವರ ನಿರ್ಮಾಣ ಸಂಬಂಧ ಅದಾನಿ ಗ್ರೂಪ್‌ ಸಂಸ್ಥೆಯ ಜೊತೆಗೆ ರಾಜ್ಯ ಸರ್ಕಾರ ಮಾಡಿಕೊಂಡ ಒಪ್ಪಂದದ ಕುರಿತಂತೆ ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.