undefined
ಲಖನೌ: ಕೇಂದ್ರ, ರಾಜ್ಯ ಮತ್ತು ನಗರ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ‘ಟ್ರಿಪಲ್ ಎಂಜಿನ್ ಸರ್ಕಾರ’ದಲ್ಲಿ ಉತ್ತರಪ್ರದೇಶದ ನಗರಗಳು ಸ್ಮಾರ್ಟ್ ಆಗಲಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಂಗಳವಾರ ವ್ಯಂಗ್ಯವಾಡಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಗಳಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳಿಗೆ ಬಿಜೆಪಿಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರವೇ ಮೂಲ ಕಾರಣ ಎಂದು ಆರೋಪಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದ ಅವರು, ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ ಸಮಸ್ಯೆಗಳೂ ಹೆಚ್ಚುತ್ತಿವೆ. ಈ ಸಮಸ್ಯೆಗಳೆಲ್ಲವೂ ನಗರಗಳಲ್ಲಿ ಸುದೀರ್ಘ ಆಡಳಿತ ನಡೆಸಿದ ಬಿಜೆಪಿಯ ಕೊಡುಗೆಗಳು. ಲಖನೌ, ಕಾನ್ಪುರ ಮತ್ತು ವಾರಾಣಸಿ ನಗರಗಳಲ್ಲಿ ಅಧಿಕಾರ ನಡೆಸಿದವರು ಬಿಜೆಪಿ ಮೇಯರ್ಗಳು ಎಂದು ಅಖಿಲೇಶ್ ಆರೋಪಿಸಿದರು.
ಅಯೋಧ್ಯೆಯ ಭೂ ಹಗರಣ ಪ್ರಕರಣದಲ್ಲಿ ಬಿಜೆಪಿ ಮೇಯರ್ ಹೆಸರು ಕೇಳಿ ಬಂದಿದೆ. ಇದರಿಂದ ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಶಹಜಹಾನ್ಪುರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ. ಆದರೆ ಸಮಾಜವಾದಿ ಪಕ್ಷದಿಂದ ಮೇಯರ್ ಅಭ್ಯರ್ಥಿಯಾಗಿದ್ದ ಅರ್ಚನಾ ವರ್ಮಾ ಅವರು ಬಿಜೆಪಿ ಸೇರಿದ್ದಾರೆ ಎಂದು ಅಖಿಲೇಶ್ ಹೇಳಿದರು.
ಲಖನೌ ಮಹಾನಗರ ಪಾಲಿಕೆಯ ಸಮಾಜವಾದಿ ಪಕ್ಷದ (ಎಸ್ಪಿ) ಮೇಯರ್ ಅಭ್ಯರ್ಥಿ ವಂದನಾ ಮಿಶ್ರಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.