ADVERTISEMENT

ಸರಳ ಬಹುಮತವಲ್ಲ, ಬಿಜೆಪಿಗೆ ಭಾರಿ ಬಹುಮತವೇ ಸಿಗಲಿದೆ: ರಾಜನಾಥ್‌ ಸಿಂಗ್‌

ಏಜೆನ್ಸೀಸ್
Published 14 ಮೇ 2019, 10:22 IST
Last Updated 14 ಮೇ 2019, 10:22 IST
   

ನವದೆಹಲಿ: ‘ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಸ್ಥಾನಕ್ಕಿಂತ ಹೆಚ್ಚು ಸ್ಥಾನವನ್ನು ಈ ಬಾರಿಯ ಚುನಾವಣೆಯಲ್ಲಿ ಪಡೆಯಲಿದೆ’ ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಭವಿಷ್ಯ ನುಡಿದರು.

‘2004 ಮತ್ತು 2014 ಚುನಾವಣೆಗಳಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಬಹುಮತ ಸಿಗಲಿದೆ. ಐದು ವರ್ಷಗಳ ಹಿಂದೆ ಪ್ರಧಾನಿ ಮೇಲೆ ಜನರಿಗಿದ್ದ ಭರವಸೆ ಮತ್ತು ಆಕಾಂಕ್ಷೆ ಈಗ ನಂಬಿಕೆಯಾಗಿ ಪರಿವರ್ತನೆಗೊಂಡಿದೆ’ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಹಣದುಬ್ಬರದ ಸಮಸ್ಯೆ ಎದುರಾಗಲಿಲ್ಲ ಮತ್ತು ಚುನಾವಣಾ ಪ್ರಚಾರ ಸಂದರ್ಭದಲ್ಲೂ ಇದು ಎಲ್ಲಿಯೂ ಕೇಳಿಬರಲಿಲ್ಲ. ಇದು ನಮ್ಮ ಸರ್ಕಾರದ ಹಣಕಾಸು ಸಾಮರ್ಥ್ಯವನ್ನು ತೋರಿಸುತ್ತದೆ’ ಎಂದರು.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಮತದಾನದ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಕುರಿತು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಸ್ವಸ್ಥ್ಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ. ದುರದೃಷ್ಟವಶಾತ್‌ ಪಶ್ಚಿಮ ಬಂಗಾಳದಲ್ಲಿ ಪದೇ ಪದೇ ಆ ರೀತಿ ಘಟನೆಗಳು ನಡೆಯುತ್ತಿವೆ. ಇದರಲ್ಲಿ ಇನ್ನಷ್ಟು ಬೇಸರ ತರುವ ಅಂಶವೆಂದರೆ, ಈ ಘಟನೆಗಳನ್ನು ಮುಖ್ಯಮಂತ್ರಿ ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು’ ಎಂದು ಟೀಕಿಸಿದರು.

‘ಹಿಂದೂ ಭಯೋತ್ಪಾದನೆ ಕುರಿತ ಕಾಂಗ್ರೆಸ್‌ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಿಂಗ್, ವಿರೋಧ ಪಕ್ಷಗಳ ಈ ರೀತಿಯ ಹೇಳಿಕೆಗಳು ಭಯೋತ್ಪಾದನೆ ವಿರುದ್ಧದ ಬಿಜೆಪಿಯ ಹೋರಾಟವನ್ನು ದುರ್ಬಲಗೊಳಿಸುತ್ತದೆ. ಭಯೋತ್ಪಾದನೆ ಎಂದು ಅದು ಭಯೋತ್ಪಾದನೆಯೇ. ಅದಕ್ಕೆ ಧರ್ಮ ಎಂಬುದಿಲ್ಲ. 2008ರಲ್ಲೂ ಕಾಂಗ್ರೆಸ್‌ ಇದೇ ರೀತಿಯ ಹೇಳಿಕೆಗಳನ್ನು ನೀಡಿದೆ. ಆಗ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌, ಭಾರತ ಅಷ್ಟೇ ಅಲ್ಲ ಪಾಕಿಸ್ತಾನವೂ ಭಯೋತ್ಪಾದನೆಯಿಂದ ನಲುಗುತ್ತಿದೆ ಎಂದು ಹೇಳಿದ್ದರು. ಇಂತಹ ಹೇಳಿಕೆಗಳನ್ನು ಪದೇ ಪದೇ ಪುನರುಚ್ಚರಿಸಿ ಸಂಪೂರ್ಣ ವ್ಯವಸ್ಥೆಯನ್ನೇ ಬಲಹೀನಗೊಳಿಸುತ್ತಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.