ADVERTISEMENT

ಪಶ್ಚಿಮ ಬಂಗಾಳ | ಸಂದೇಶ್‌ಖಾಲಿಗೆ ತೆರಳುತ್ತಿದ್ದ ಬಿಜೆಪಿ ನಾಯಕಿಯರಿಗೆ ತಡೆ

ಪಿಟಿಐ
Published 7 ಮಾರ್ಚ್ 2024, 13:12 IST
Last Updated 7 ಮಾರ್ಚ್ 2024, 13:12 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅಗ್ನಿಮಿತ್ರಾ ಪೌಲ್ ಮತ್ತು ಲಾಕೆಟ್‌ ಚಟರ್ಜಿ ಅವರ ನೇತೃತ್ವದಲ್ಲಿ ಸಂದೇಶ್‌ಖಾಲಿಗೆ ತೆರಳುತ್ತಿದ್ದ ಪಕ್ಷದ ಮಹಿಳಾ ಸದಸ್ಯರ ತಂಡವನ್ನು ರಾಜ್ಯ ಪೊಲೀಸರು ಕೋಲ್ಕತ್ತದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ತಡೆದರು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ತಂಡದ ಮಧ್ಯೆ ವಾಗ್ವಾದ ನಡೆಯಿತು. ಮಹಿಳಾ ಸದಸ್ಯರು ರಸ್ತೆಯಲ್ಲೆ ಕುಳಿತು ಪೊಲೀಸರ ಕ್ರಮದ ವಿರುದ್ಧ ಪ್ರತಿಭಟಿಸಿದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ADVERTISEMENT

‘ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 144 ಅಡಿ ವಿಧಿಸಿರುವ ನಿಷೇಧಾಜ್ಞೆ ಸಂದೇಶ್‌ಖಾಲಿಯ ಇನ್ನೂ ಕೆಲವೆಡೆ ಜಾರಿಯಲ್ಲಿರುವ ಕಾರಣ ನೀಡಿ ನಮ್ಮನ್ನು ತಡೆಯಲಾಗಿದೆ’ ಎಂದು ಬಿಜೆಪಿಯ ಮಹಿಳಾ ಮುಖಂಡರು ಆರೋಪಿಸಿದ್ದಾರೆ. ಜೊತೆಗೆ, ನಿಷೇಧಾಜ್ಞೆ ನೆಪ ಹೇಳಿ ಕೋಲ್ಕತ್ತದ ನ್ಯೂಟೌನ್‌ನಲ್ಲಿಯೇ ತಮ್ಮನ್ನು ತಡೆದಿರುವುದು ಖಂಡನಾರ್ಹ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಅಸ್ಲೋಲ್‌ ಶಾಸಕಿ ಅಗ್ನಿಮಿತ್ರಾ, ‘ನಿಷೇಧಾಜ್ಞೆ ಇಲ್ಲದ ಸ್ಥಳಗಳಿಗೆ ಭೇಟಿ ನೀಡುವುದು ನಮ್ಮ ಉದ್ದೇಶವಾಗಿತ್ತು. ಕೊಲ್ಕತ್ತದಲ್ಲಿಯೂ ನಿಷೇಧಾಜ್ಞೆ ಜಾರಿಯಲ್ಲಿತ್ತೇ’ ಎಂದು ಪ್ರಶ್ನಿಸಿದ್ದಾರೆ.  

ಟಿಎಂಸಿ ಪ್ರತಿಕ್ರಿಯೆ: ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಕುನಾಲ್ ಘೋಷ್ ಅವರು, ಸಂದೇಶ್‌ಖಾಲಿಯ ಜನರನ್ನು ಪ್ರಚೋದಿಸಲು ಬಿಜೆಪಿ ನಾಯಕರು ಉದ್ದೇಶಿಸಿದ್ದಾರೆ. ಪರಿಸ್ಥಿತಿ ಸಹಜಸ್ಥಿತಿಗೆ ಮರಳುವುದು ಅವರಿಗೆ ಬೇಕಿಲ್ಲ. ಪೊಲೀಸರು ಅವರ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.