ನವದೆಹಲಿ: ‘ಚುನಾವಣೆ ಸಾಧನೆ ಆಧರಿಸಿದರೆ ಪಕ್ಷ ಇನ್ನು ಉತ್ತುಂಗದ ಸ್ಥಿತಿಯನ್ನು ತಲುಪಿಲ್ಲ. ಕಾರ್ಯಕರ್ತರು ಇನ್ನು ಉನ್ನತವಾದ ಗುರಿ ಹೊಂದಬೇಕು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುರುವಾರ ಹೇಳಿದರು.
ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಘಟಕದ ಸದಸ್ಯರು, ವಿವಿಧ ರಾಜ್ಯಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಕೇರಳ, ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿಯೂ ಪಕ್ಷ ಅಧಿಕಾರಕ್ಕೆ ಬಂದಾಗ ಪಕ್ಷ ಉತ್ತುಂಗದ ಸ್ಥಿತಿಯನ್ನು ತಲುಪಿದಂತೆ ಆಗಲಿದೆ ಎಂದು ಸಭೆಯಲ್ಲಿ ಪ್ರತಿಪಾದಿಸಿದರು.
ಶೀಘ್ರವೇ ಆರಂಭವಾಗಲಿರುವ ಪಕ್ಷದ ಸದಸ್ಯತ್ವ ಅಭಿಯಾನ ಪ್ರಕ್ರಿಯೆಗೆ ಸಭೆಯಲ್ಲಿ ರೂಪುರೇಷೆ ನೀಡಲಾಯಿತು. ಸದಸ್ಯರ ಸಂಖ್ಯೆಯನ್ನು ಶೇ 20ರಷ್ಟು ಏರಿಸುವ ಗುರಿ ಇದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸದಸ್ಯತ್ವ ಅಭಿಯಾನ ಮತ್ತು ಸಾಂಸ್ಥಿಕ ಘಟಕಗಳಿಗೆ ಚುನಾವಣೆ ಬಳಿಕ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಶಾ ಅವರೇ ಅಧ್ಯಕ್ಷರಾಗಿರಲಿದ್ದಾರೆ. ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಚುನಾವಣೆಯನ್ನು ಪಕ್ಷ ಇವರ ನೇತೃತ್ವದಲ್ಲಿ ಎದುರಿಸುವುದು ಖಚಿತವಾಗಿದೆ.
ಮುಖಂಡ ಶಿವರಾಜ್ ಸಿಂಗ್ ಚೌಹಾಣ್ಸದಸ್ಯತ್ವ ಅಭಿಯಾನದ ಉಸ್ತುವಾರಿ ವಹಿಸುವರು. ನಂತರ ಸಾಂಸ್ಥಿಕ ಘಟಕಗಳಿಗೆ ಚುನಾವಣೆ ನಡೆಯಲಿದೆ. ಸದಸ್ಯತ್ವ ಅಭಿಯಾನ ಜು.6ರಂದು ಆರಂಭವಾಗುವ ಸಂಭವವಿದೆ.
‘ಮೋದಿ ಸರ್ಕಾರ ಅಧಿಕಾರಕ್ಕೆ ಮರಳಲು ಪಕ್ಷದ ಕಾರ್ಯಸೂಚಿಯಾಗಿರುವ ರಾಷ್ಟ್ರೀಯತೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮಗಳು ಕಾರಣ ಎಂದು ಶಾ ಪ್ರತಿಪಾದಿಸಿದರು’ ಎಂದು ಯಾದವ್ ಹೇಳಿದರು.
‘ಈ ಜನಾದೇಶ ಜಾತೀಯತೆ, ಕುಟುಂಬ ಆಡಳಿತ, ಕೋಮುವಾದದ ವಿರುದ್ಧ ಬಂದಿದೆ’ ಎಂದು ಸಭೆಯಲ್ಲಿ ಹೇಳಿದ ಜಾತಿ ಆಧಾರಿತ ಪಕ್ಷಗಳನ್ನು ಜನತೆ ತಿರಸ್ಕರಿಸುತ್ತಾರೆ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ ಎಸ್ಪಿ–ಬಿಎಸ್ಪಿ ವೈಫಲ್ಯವೇ ಕಾರಣ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.