ಲಖನೌ: ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ದೇಶದ ಗಮನ ಸೆಳೆದಿದ್ದ ತೇಜ್ ಬಹದ್ದೂರ್ ಯಾದವ್ ಅವರನ್ನು ಎಸ್ಪಿ–ಬಿಎಸ್ಪಿ ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಸೋಮವಾರ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತೇಜ್ ಬಹದ್ದೂರ್ ತಿಳಿಸಿದ್ದರು. ಈಗ ಇದ್ದಕ್ಕಿದ್ದ ಹಾಗೆ ಎಸ್ಪಿ–ಬಿಎಸ್ಪಿ ತನ್ನ ಈ ಹಿಂದಿನ ಅಭ್ಯರ್ಥಿ ಶಾಲಿನಿ ಯಾದವ್ ಅವರನ್ನು ಬದಲಿಸಿ ತೇಜ್ ಬಹದ್ದೂರ್ ಅವರಿಗೆ ಟಿಕೆಟ್ ನೀಡಿದೆ.
ಶಾಲಿನಿ ಯಾದವ್ ಅವರನ್ನು ವಾರದ ಹಿಂದಷ್ಟೇ ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಇವರು ಕಾಂಗ್ರೆಸ್ನ ಹಿರಿಯ ಮುಖಂಡ ಶ್ಯಾಮ್ ಲಾಲ್ ಯಾದವ್ ಅವರ ಮಗಳು. 2017ರಲ್ಲಿ ಶಾಲಿನಿ ಅವರು ವಾರಾಣಸಿ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
‘ನಾನು ನಿಜವಾದ ಚೌಕಿದಾರ. 21 ವರ್ಷಗಳ ಕಾಲ ದೇಶದ ಗಡಿಯನ್ನು ರಕ್ಷಿಸಿದ್ದೇನೆ ಮತ್ತು ಈಗ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಚೌಕಿದಾರ್ ಎನ್ನುವ ಪದ ಮೋದಿ ಅವರಿಗೆ ಒಪ್ಪುವುದಿಲ್ಲ’ ಎಂದು ಹರಿಯಾಣ ಮೂಲದ ತೇಜ್ ಬಹದ್ದೂರ್ ಹೇಳಿದ್ದಾರೆ.
‘ಯಾವುದೇ ಪಕ್ಷದ ಗುಲಾಮನಾಗಲು ನನಗೆ ಇಷ್ಟವಿಲ್ಲ, ಪಕ್ಷೇತರನಾಗಿ ಕಣಕ್ಕೆ ಇಳಿಯುತ್ತೇನೆ. ಜಯಗಳಿಸುವ ವಿಶ್ವಾಸವಿದೆ’ ಎಂದು ಅವರು ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.